ಮುಂಬಯಿ: ನಗರದ ಪ್ರಸಿದ್ಧ ಲೆಕ್ಕ ಪರಿಶೋಧಕ, ಫೈನಾನ್ಯಿಯಲ್ ಕನ್ಸಲ್ಟೆಂಟ್ ಸಿಎ| ಎನ್.ಬಿ ಶೆಟ್ಟಿ ಅವರು ಪ್ರತಿಷ್ಠಿತ ಟೈಮ್ಸ್ ಮೆನ್ ಆಫ್ ದ ಈಯರ್ ೨೦೨೦ ಪುರಸ್ಕಾರಕ್ಕೆ ಭಾಜನರಾಗಿದ್ದು ಮಹಾನಗರದಲ್ಲಿ ಜರುಗಿದ ಸಮಾರಂಭದಲ್ಲಿ ಬಾಲಿವುಡ್ ಪ್ರಸಿದ್ಧ ಗಾಯಕಿ ಇಲಾ ಅರುಣ್ ಪುರಸ್ಕಾರ ಫಲಕವನ್ನು ಎನ್.ಬಿ ಶೆಟ್ಟಿ ಶೆಟ್ಟಿ ಅವರಿಗೆ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನುಂಬಯಿನಲ್ಲಿನ ಬಾಂದ್ರಾ ಪಶ್ಚಿಮದ ಹಿಲ್ರೋಡ್ನಲ್ಲಿ ಲೆಕ್ಕ ಪರಿಶೋಧಕರಾಗಿ ಮತ್ತು ಫೈನಾನ್ಯಿಯಲ್ ಕನ್ಸಲ್ಟೆಂಟ್ ಸಂಸ್ಥೆ ಹೊಂದಿರುವ ಇವರು ಸುಮಾರು ೫ ದಶಕಗಳ ಅಗಾಧ ಜ್ಞಾನ, ಸುದೀರ್ಘ ಅನುಭವಸ್ಥವುಳ್ಳ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ತ್ರಿವೇಣಿ ಗ್ರೂಫ್ ಹಾಸ್ಪಿಟಾಲಿಟಿ ಸಂಸ್ಥೆಯ ಕಾರ್ಯಾಧ್ಯಕ್ಷ ಆಗಿರುವ ಎನ್.ಬಿ ಶೆಟ್ಟಿ ಓರ್ವ ಉದ್ಯಮಿ, ಮರ್ಚೆಂಟ್, ಬ್ಯಾಂಕಿಂಗ್, ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಟೆಕ್ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಾಹಿಸಿದ ಓರ್ವ ತುಳಿ ಕನ್ನಡಿಗ.
ಉಡುಪಿ ಬೊಮ್ಮಾರಬೆಟ್ಟು ನಿವಾಸಿ, ಕೃಷಿಕರಾದ ಕರಿಯ ಶೆಟ್ಟಿ ಮತ್ತು ಜಲಜ ಶೆಟ್ಟಿ ಹಿರಿಯಡ್ಕ ದಂಪತಿ ಸುಪುತ್ರರಾಗಿರುವ ಇವರು ಓರ್ವ ಸರಳ, ಸಜ್ಜನ ವ್ಯಕ್ತಿತ್ವದ, ಮಿತಭಾಷಿ ಆಗಿದ್ದು ತೆರೆಮರೆಯ ಸಮಾಜ ಸೇವಕರಾಗಿರುವರು. ಎಂದೂ ಜಾತಿ ಮತ, ಧರ್ಮ, ಭಾಷೆಯನ್ನು ಕಾಣದೆ ಸಮಾಜದ ಆರ್ಥಿಕ ಹೀನ ಜನತೆಗೆ ಮಾನವೀಯತೆಯ ನೆಲೆಯಲ್ಲಿ ಸಹಾಯಸ್ತ ಚಾಚಿದ ಸಹೃದಯಿ ವ್ಯಕ್ತಿತ್ವವುಳ್ಳ ಕೊಡುಗೈದಾನಿ. ಒಳನಾಡ ಮತ್ತು ಹೊರನಾಡ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಇನ್ನಿತರ ಸೇವಾ ಸಂಸ್ಥೆಗಳಿಗೆ ಪ್ರೋತ್ಸಹಕರಾಗಿದ್ದಾರೆ.
೧೯೭೦ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪದೋನ್ನತಿಯಾಗಿ ರಾಷ್ಟçದಲ್ಲೇ ಹನ್ನೊಂದನೇ ರ್ಯಾಂಕ್ ಪಡೆದ ಸರ್ವೋತ್ಕ್ರಷ್ಟ ಪ್ರತಿಭೆಯಾಗಿ ಗುರುತಿಸಿ ಕನ್ನಡಿಗರ ಹಿರಿಮೆಯ ಪ್ರತಿಭಾನ್ವಿತರಾಗಿದ್ದರು. ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಶೆಟ್ಟಿ ಅವರು ೨೦೨೦ರಲ್ಲಿ ಎಸ್ಎಂಇ ಆಂಟರ್ಪ್ರಿನರ್ಶಿಪ್ ಎಕ್ಸ್ಲೆನ್ಸ್ ಆವಾರ್ಡ್ ಪುರಸ್ಕಾರಕ್ಕೂ ಭಾಜನರಾಗಿದ್ದರು.
