ಮುಂಬಯಿ : ಎನ್ಆರ್ಐ ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ಲೋಕೋಪಕಾರಿ, ಸಮಾಜ ಸುಧಾರಣೆ ಮತ್ತು ಮಾನವೀಯ ಹಾಗೂ ಅನುಪಮ ದತ್ತಿ ಕಾರ್ಯಗಳು, ಜಾಗತಿಕ ನಾಯಕತ್ವ ಮತ್ತು ನಿರ್ವಹಣೆಗಾಗಿ ಫ್ರಾನ್ಸ್ನ ಪ್ರತಿಷ್ಠಿತ, ವಿಶ್ವಪ್ರಸಿದ್ಧ ಯುರೋಪಿಯನ್ ಇಂಟರ್ನೇಶನಲ್ ಯೂನಿವರ್ಸಿಟಿ ಪ್ಯಾರಿಸ್ ಸಂಸ್ಥೆಯು ವೃತ್ತಿಪರ ಡಾಕ್ಟರೇಟ್ ನೀಡಿ ಗೌರವಿಸಿದೆ.

ಕಳೆದ ಶನಿವಾರ (ಜ.೩೦) ಬೆಂಗಳೂರು ಅಲ್ಲಿನ ಕ್ಲಾರ್ಕ ಎಕ್ಸೋಟಿಕಾ ಸಭಾಗೃಹದಲ್ಲಿ ಅಯೋಜಿಸಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ, ಎಂಎಲ್ಸಿ ಭೋಜೆ ಗೌಡ, ಪ್ರಸಿದ್ಧ ಶಿಕ್ಷಣ ತಜ್ಞ, ಬರಹಗಾರ ಮತ್ತು ಶೇಷಾದ್ರಿಪುರಂ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊಫೆಸರ್ ರಾಧಾಕೃಷ್ಣ, ಪ್ಯಾರಿಸ್ನ ಯುರೋಪಿಯನ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಫ್ರಾನ್ಸ್ ಇದರ ನಿರ್ದೇಶಕ (ಜಾಗತಿಕ ಶೈಕ್ಷಣಿಕ ಪ್ರಚಾರಗಳು) ಡಾ| ಅಜಯ್ ದೇಸಾಯಿ ಅವರು ಕೊಲಾಸೋ ಅವರಿಗೆ ಡಾಕ್ಟರೇಟ್ ಪ್ರಮಾಣಪತ್ರ ನೀಡಿ ಗೌರವಿಸಿ ಅಭಿನಂದಿಸಿದರು.
ಸಂಶೋಧನಾ ತಂಡವು ಕಂಡುಕೊಂಡಂತೆ ಗೂಗಲ್, ಇಂಟರ್ನೆಟ್, ಮಾಧ್ಯಮ ವರದಿಗಳು ಮತ್ತು ಇತರ ಹಳೆಯ ನಿಯತಕಾಲಿಕೆಗಳಿಂದ ಪಡೆದ ಪುರಸ್ಕಾರಗಳು ಮತ್ತು ಲೋಕೋಪಕಾರಿ ಕೃತಿಗಳನ್ನು ಪರಿಶೀಲಿಸಿದ ನಂತರ ಪ್ಯಾರಿಸ್ನ ಜಾಗತಿಕವಾಗಿ ಗುರುತಿಸಲ್ಪಟ್ಟ ಯುರೋಪಿಯನ್ ಇಂಟರ್ನೇಶನಲ್ ಯೂನಿವರ್ಸಿಟಿ ಈ ವೃತ್ತಿಪರ ಡಾಕ್ಟರೇಟ್ನ್ನು ರೊನಾಲ್ಡ್ ಕೊಲಾಸೊ ಅವರಿಗೆ ಪ್ರದಾನಿಸಿದೆ. ಈ ವಿಶ್ವವಿದ್ಯಾನಿಲಯವು ವಿಶ್ವಸಂಸ್ಥೆಯಿಂದ ಜಗತ್ತಿನ ಬರೇ ೮ ರಿಂದ ೧೫ ಸರ್ವೋನ್ನತ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದು ಈ ಬಾರಿ ಸುಮಾರು೧೯೪ ದೇಶಗಳ ಗಣ್ಯವ್ಯಕ್ತಿಗಳನ್ನು ಆಯ್ಕೆ ಸಮಿತಿ ಗುರುತಿಸಿದ್ದು ಆ ಪೈಕೆ ಕರ್ನಾಟಕ ಮೂಲದ ರೊನಾಲ್ಡ್ ಕೊಲಾಸೊ ಓರ್ವರಾಗಿದ್ದಾರೆ.
ಗೌರವ ಸ್ವೀಕರಿಸಿ ಉತ್ತರಿಸಿದ ಡಾ| ಕೊಲಾಸೋ, ನಾನು ಮತ್ತು ನನ್ನ ಪತ್ನಿ ನಮ್ಮ ಮದುವೆಯ ದಿನದಂದು ಪ್ರಮಾಣವಚನ ಸ್ವೀಕರಿಸಿದರು ಮತ್ತು ಅದು ಸಮಾಜದ ಸೇವೆ ಮಾಡಲು ಪ್ರೇರೇಪಿಸಿದೆ ಎಂದರು. ನಾನು ಮಾಡುತ್ತಿರುವ ಸಾಮಾಜಿಕ, ದತ್ತಿ ಮತ್ತು ಮಾನವೀಯ ಕಾರ್ಯಗಳು ಏನೇ ಇರಲಿ ಅದು ನನ್ನ ಪತ್ನಿಯ ಮತ್ತು ಸದ್ಯ ಮಕ್ಕಳ ಪ್ರೇರಣೆಯಾಗಿದೆ. ವೈವಾಹಿಕ ಜೀವನದ ದಿನ ನಾವು ಬಲಿಪೀಠಕ್ಕೆ ಕಾಲಿಟ್ಟಾಗ ನಾನು ತೆಗೆದುಕೊಂಡ ಪ್ರಮಾಣವಚನದಿಂದ ಪ್ರೇರೇಪಿಸಲ್ಪಟ್ಟಿದೆ. ನಾವೆಲ್ಲರೂ ದೇವರನ್ನು ನಂಬುತ್ತೇವೆ, ನೀವು ದೇವರ ಮುಂದೆ ನಿಂತು ಕಣ್ಣು ಮುಚ್ಚಿ, ಕೈಗಳನ್ನು ಮಡಚಿ, ಅವನಿಗೆ ಪ್ರಾರ್ಥಿಸಿ ಮತ್ತು ಇಂದಿನಿಂದ ನನ್ನ ಉಳಿತಾಯದಿಂದ ಸ್ವಲ್ಪ ಶೇಕಡಾವನ್ನು ಬಡ ಮತ್ತು ಸಾಮಾಜಿಕ ಕಾರಣಕ್ಕಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದರು. ಅದಕ್ಕಾಗಿಯೇ ನಾನು ಇಂತಹ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಯಿತು.
ಯಾವುದೇ ಪ್ರಶಸ್ತಿ ಅಥವಾ ಬಹುಮಾನಕ್ಕಾಗಿ ನಾನು ದಾನ ಮತ್ತು ಮಾನವೀಯ ಕೆಲಸಗಳನ್ನು ಮಾಡುತ್ತಿಲ್ಲ. ಯಾವುದೇ ಮಾನ್ಯತೆ ಅಥವಾ ಡಾಕ್ಟರೇಟ್ಗಾಗಿಯೂ ಅಲ್ಲ, ಬರೇ ನನ್ನ ಆತ್ಮವಿಶ್ವಾಸಕ್ಕೆ ಪೂರಕವಾಗಿ ಬಾಳಲು ಜನಸೇವೆಯಲ್ಲಿ ತೊಡಗಿಸಿರುವೆ. ನಮ್ಮ ಮಾತೃ ಸಮುದಾಯ, ನಾನು ಹುಟ್ಟಿ ಬೆಳೆದ ಸಮಾಜದಲ್ಲಿನ ಜನತೆಗೆ ಸಹಾಯಾಸ್ತ ನೀಡುತ್ತಾ ಅವರಿಗೆ ಆಸರೆಯಾಗಿಸುವ ಕರ್ತವ್ಯವೇ ನನಗೆ ಸೇವಾ ಪ್ರೇರಣೆಯಾಗಿದೆ. ದೇವರು ಈ ಲೋಕವನ್ನು ಹಾದುಹೋಗಲು ನಮಗೆ ಒಂದೇಒAದು ಅವಕಾಶ ನೀಡಿದ್ದು, ಮತ್ತೆ ಈ ಜಗತ್ತಿಗೆ ಮರಳಲು ಎರಡನೆಯ ಅವಕಾಶವಿಲ್ಲ. ಆದ್ದರಿಂದ ನಮ್ಮ ಸಹೋದರ, ಸಹೋದರಿಯರಿಗೆ ನಾವು ಸ್ವಲ್ಪವೇ ದಾನ ಮಾಡಿ ಸಮಾಜದ ಋಣ ಪೂರೈಸಲು ಸೇವೆ ಸೂಕ್ತ ಹಾದಿಯಾಗಿದೆ ಎಂದು ಈ ಗೌರವಕ್ಕೆ ಕಾರಣಕರ್ತರಾದ ಎಲ್ಲರಿಗೂ ವಂದಿಸಿದರು.ಕಾರ್ಯಕ್ರಮದಲ್ಲಿ ಜೀನ್ ಆರ್.ಕೊಲಾಸೋ, ನೈಜೀಲ್ ಆರ್.ಕೊಲಾಸೋ, ನಿಖಿತಾ ಎನ್.ಕೊಲಾಸೋ, ಇಂಟರ್ನೇಶನಲ್ ಫೆಡರೇಶನ್ ಆಫ್ ಕರ್ನಾಟಕ ಕ್ರಿಶ್ಚನ್ ಅಸೋಸಿಯೇಶನ್ನ (ಇಫ್ಕಾ) ರಾಜ್ಯ ಸಂಚಾಲಕ ಡೆನಿಸ್ ಡಿಸಿಲ್ವಾ ಇನ್ನಿತರ ಗಣ್ಯರು ಹಾಜರಿದ್ದು ಡಾಕ್ಟರೇಟ್ ಸ್ವೀಕೃತ ಕೊಲಾಸೋ ದಂಪತಿಗೆ ಶುಭಾರೈಸಿದರು. ಸುಂದರೇಶನ್ ಮತ್ತು ದೀಪಿಕಾ ಬೇಡಿ ಈ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.
