ಗುರುಪುರ : ಮಂಗಳೂರಿನ ಬಿಜೈ ಮತ್ತು ಕೋರ್ಟ್ ಆವರಣದಲ್ಲಿ ಲಷ್ಕರ್ ಜಿಂದಾಬಾದ್ ಹ್ಯಾಸ್ ಟ್ಯಾಗ್ನಲ್ಲಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯ ನಂಟು ಇರುವ ಗುಮಾನಿ ಇರುವುದರಿಂದ, ರಾಷ್ಟ್ರೀಯ ತನಿಖಾ ದಳದಿಂದ(ಎನ್ಐಎ) ಪ್ರಕರಣದ ತನಿಖೆ ನಡೆಸಬೇಕೆಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಆಗ್ರಹಿಸಿದ್ದಾರೆ.
ಉನ್ನತ ವ್ಯಾಸಂಗ ಪಡೆಯುತ್ತಿರುವವರಿಂದಲೇ ನಗರದ ಗೋಡೆಗಳಲ್ಲಿ ಮುಸ್ಲಿಂ ಉಗ್ರಗಾಮಿ ಸಂಘಟನೆಗಳ ಪರವಾಗಿ ಬರೆದಿದ್ದಾರೆ ಎಂಬುದು ಬಂಧಿತ ಆರೋಪಿಗಳಿಬ್ಬರ ವಿಚಾರಣೆಯಿಂದ ಗೊತ್ತಾಗಿದೆ. ಹಾಗಾಗಿ ಇದರಲ್ಲಿ `ಜಿಹಾದಿ’ ತಂತ್ರ ಅಡಕವಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇಲ್ಲಿ ವಿಚ್ಛಿದ್ರಕಾರಿ ಗುಂಪೊಂದು ಕೋಮುಭಾವನೆ ಕೆರಳಿಸಿ ಸಮಾಜ ಮತ್ತು ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಇದು ಜ್ಞಾನ ಹೊಂದಿರುವ `ಅಜ್ಞಾನಿಗಳ’ ಕೃತ್ಯವೆಂಬುದು ಸ್ಪಷ್ಟ. ಇಷ್ಟೊಂದು ಗಂಭೀರ ಪ್ರಕರಣದಲ್ಲಿ ಆರೋಪಿಗಳ ನಿಜವಾದ ತಂತ್ರಗಾರಿಕೆ ಬೆಳಕಿಗೆ ಬರಬೇಕಾದರೆ ಉನ್ನತ ಮಟ್ಟದ ತನಿಖೆ(ಎನ್ಐಎ) ಅವಶ್ಯ ಎಂದು ಸ್ವಾಮಿಗಳು ಒತ್ತಾಯಿಸಿದ್ದಾರೆ.
