ಬಂಟ್ವಾಳ: ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಹಿರಿಯ ಸಹಕಾರಿ, ಧಾರ್ಮಿಕ ಮುಂದಾಳು, ಕೊಡಂಬೆಟ್ಟು ಗ್ರಾಮದ ಕುದ್ಕಂದೋಡಿ ನಿವಾಸಿ ಬೂಬ ಪೂಜಾರಿ ಕುದ್ಕಂದೋಡಿ(೬೭) ಅವರು ಹೃದಯಾಘಾತದಿಂದ ಅ.೧೭ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಅವರು ಸುಮಾರು ೪೦ ವರ್ಷ ಪಿಲಾತಬೆಟ್ಟು ವ್ಯ.ಸೇ.ಸ. ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು.
ಸುಮಾರು ೪೫ ವರ್ಷಗಳಿಂದ ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ನಡ್ವಂತಾಡಿ ಶ್ರೀ ಸೋದೆ ವಾದಿರಾಜ ಮಠದಲ್ಲಿ ನಿರಂತರ ಸೇವೆ ಸಲ್ಲಿಸಿದ್ದು, ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ, ಪಾಂಗಲ್ಪಾಡಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಮೊಕ್ತೇಸರ, ವ್ಯವಸ್ಥಾಪನ ಸಮಿತಿ ಸದಸ್ಯರಾಗಿ, ಪಾಂಗಲ್ಪಾಡಿ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಸಿರಿಗುಂಡದಪಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಪ್ರ.ಕಾರ್ಯದರ್ಶಿಯಾಗಿ, ಆಲದಪದವು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾಗಿ,ಹಲೆಪ್ಪಾಡಿ ಶ್ರೀ ಬಾಲಾಂಜನೇಯ ಭಜನ ಮಂಡಳಿ, ಕೊಡಂಬೆಟ್ಟು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷರಾಗಿ, ಬೊಟ್ಟಿಕಂಡ ಮನೆತನ ಕುಟುಂಬದ ಗುರಿಕಾರರಾಗಿ ಹಾಗೂ ಇನ್ನಿತರ ಸಂಘ,ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಹಿಂದೆ ಹವ್ಯಾಸಿ ನಾಟಕ ಕಲಾವಿದರಾಗಿದ್ದರು. ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳಿಂದ ಸಮ್ಮಾನಿತರಾಗಿದ್ದರು.
