ಅಜೆಕಾರು: ಹಿರಿಯರನ್ನು ಕಡೆಗಣಿಸಬೇಡಿ. ಅವರ ಸಹಾಯಗುಣ, ಸರಳತೆ, ಕಾಳಜಿ, ಪ್ರೀತಿ ಮೊದಲಾದ ಆದರ್ಶಗಳನ್ನು ನಾವೂ ರೂಢಿಸಿಕೊಂಡರೆ ದೇಶಕ್ಕೆ ಉತ್ತಮ ಭವಿಷ್ಯವಿದೆ. ರತ್ನಾಕರ ಮತ್ತು ಮಾಲತಿ ದಂಪತಿಗಳ ಗೌರವ ಕಾರ್ಯಕ್ರಮ ನಿಜವಾಗಿಯೂ ಅರ್ಥಪೂರ್ಣ ಕಾರ್ಯಕ್ರಮ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತೆ ರತ್ನಾವತಿ ನಾಯಕ್ ಹೇಳಿದರು.
ಅವರು 80ರ ಹರೆಯದ ವಿಶ್ರಾಂತ ಮುಖ್ಯೋಪಾಧ್ಯಾಯ ದಂಪತಿ ಎಂ.ರತ್ನಾಕರ ರಾವ್ ಮತ್ತು ಮಾಲತಿ ಕೆ. ದಂಪತಿಗಳನ್ನು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಷರಿಷತ್ತು ಮತ್ತು ಆದಿಗ್ರಾಮೋತ್ಸವ ಸಮಿತಿಗಳ ಸಹಕಾರದೊಂದಿಗೆ ಮಂಗಳವಾರ ಹಿರ್ಗಾನದಲ್ಲಿ ಆಯೋಜಿಸಿದ್ದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡುತ್ತಿದ್ದರು.
ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪೋಷಕರು- ಹೆತ್ತವರು ಸಮಾನ ಜವಾಬ್ದಾರಿಯನ್ನು ನಿರ್ವಹಿಸ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಕೂಡಾ ಅನಾವಶ್ಯಕವಾಗಿ ಬಲಿಪಶುಗಳಾಗ ಬೇಕಾದ ಸ್ಥಿತಿ ಬಂದೊದಗಿದೆ ಎಂದು ಉದ್ಯಮಿ, ಸಮಾಜ ಸೇವಾಸಕ್ತ ಗೋಪಿನಾಥ ಭಟ್ ಅಭಿಪ್ರಾಯ ಪಟ್ಟರು.ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಹಕಾರಿ ದುರೀಣ ಶಿರಿಯಣ್ಣ ಶೆಟ್ಟಿ, ವ್ಯಾಪಾರೋದ್ಯಮಿ ದೇವದಾಸ ನಾಯಕ್, ವಿಶ್ರಾಂತ ಮುಖ್ಯೋಪಾಧ್ಯಾಯ ಲೋಕನಾಥ ಜೈನ್, ವಿಶ್ರಾಂತ ಶಿಕ್ಷಕಿ ಸುಜಯ ಎಲ್ ಜೈನ್, ಜಯರಾಮ ಮಡಿವಾಳ ಅತಿಥಿಗಳಾಗಿದ್ದರು.ಸಮಿತಿಯ ಉಪಾಧ್ಯಕ್ಷ ಶರತ್ ಕಾನಂಗಿ, ಸುಬ್ರಮಣ್ಯ ಆಚಾರ್ಯ ಅಮವಾಸ್ಯೆಬೈಲ್, ಸುನಿಜ. ಎಸ್.ಎ, ಸುನಿಧಿ ಎಸ್.ಎ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ಸ್ವಾಗತಿಸಿ ವಂದಿಸಿದರು.
