ಬಂಟ್ವಾಳ: ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ತಮ್ಮ ರಾಜಕೀಯ ಗುರು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು. ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ತವರೂರಿಗೆ ಅಗಮಿಸಿರುವ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮೊದಲಿಗೆ ಬಿ.ಸಿ.ರೋಡಿಗೆ ಸಮೀಪದ ಬಸ್ತಿಪಡ್ಪುವಿನಲ್ಲಿರುವ ಹಿರಿಯ ನೇತಾರರು,ಕೇಂದ್ರಮಾಜಿ ಸಚಿವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಕಾಲಿಗೆ ಪ್ರಣಾಮವನ್ನು ಸಲ್ಲಿಸಿ ಆರ್ಶೀವಾದ ಪಡೆದರು.
ಈ ಸಂದರ್ಭ ತಮ್ಮ ಶಿಷ್ಯ ಹರಿಕೃಷ್ಣರನ್ನು ತುಂಬು ಮನಸ್ಸಿನಿಂದ ಆರ್ಶೀವದಿಸಿದ ಜನಾರ್ದನ ಪೂಜಾರಿಯವರು,ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಹುದ್ದೆ ದೊರಕಲಿ ಎಂದು ಹಾರೈಸಿದರು. ಬಹು ಸಮಯದ ಬಳಿಕ ಮುಖಾಮುಖಿಯಾದ ಗುರು-ಶಿಷ್ಯರು ಕೆಲಹೊತ್ತುಗಳ ಕುಶಲೋಪಚರಿಯನ್ನು ನಡೆಸಿದರು.ಪೂಜಾರಿಯವರು ಸಂಸ್ಥೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡು ಜಿಲ್ಲೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನವಿತ್ತರು.
ಈ ಸಂದರ್ಭ ಪೂಜಾರಿಯವರ ಶ್ರೀಮತಿಯವರು ಉಪಸ್ಥಿತರಿದ್ದರು. ಹರಿಕೃಷ್ಣ ಬಂಟ್ವಾಳ ಅವರು ಸುಮಾರು 35 ವರ್ಷಗಳ ಕಾಲ ಜನಾರ್ದನ ಪೂಜಾರಿಯವರ ಒಡನಾಡಿಯಾಗಿದ್ದುಕೊಂಡು ಅವರ ಗರಡಿಯಲ್ಲಿ ರಾಜಕೀಯವಾಗಿ ಪಳಗಿದವರು.ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅವರು ಮರಳಿ ತಮ್ಮ ತವರು ಪಕ್ಷ ಬಿಜೆಪಿಗೆ ಬಂದಿದ್ದರು. ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕು ತೆರಳಿದ ಹರಿಕೃಷ್ಣ ಬಂಟ್ವಾಳ್ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಅಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಇವರನ್ನು ಅಭಿನಂದಿಸಲಾಯಿತು.
