ಮುಂಬಯಿ: ಕಳೆದ ಸುಮಾರು ಮೂರು ತಿಂಗಳುಗಳ ಕೊರೊನಾ ಅವಧಿಯಲ್ಲಿ ಹಗಳಿರುಲು ಶ್ರಮಿಸಿ ಜನತಾ ರಕ್ಷಣೆಯಲ್ಲಿ ತೊಡಗಿಸಿಕೊಂಡು ಕೋವಿಡ್-19 ಸಾಂಕ್ರಮಿಕ ಮಹಾಮಾರಿಗೆ ಬಲಿಯಾದ ಬೃಹನ್ಮುಂಬಯಿ ಪೊಲೀಸರ ಕುಟುಂಬಕ್ಕೆ ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರತಿಮ ಸಂಘಟಕ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ಹೆಸರಾಂತ ಉದ್ಯಮಿಗಳಾದನವೀನ್ ಆಳ್ವಾ ಹಾಗೂ ಕಲ್ಪೇಶ್ ಶ್ಹಾತಮ್ಮ ವತಿಯಿಂದ ಕೊಡಮಾಡಿದ ಆರ್ಥಿಕ ಸಹಾಯ ತಲಾ ರೂಪಾಯಿ 50,000 ಮೊತ್ತವನ್ನು ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಪೊಲೀಸರ ಪರಿವಾರಕ್ಕೆ ಸಾಂತ್ವಾನ ತಿಳಿಸಿ ಧೈರ್ಯ ತುಂಬಿದರು ಹಾಗೂ ಕೋವಿಡ್ ವಾರಿಯರ್ಸ್ ಕಾರ್ಯಕರ್ತರಿಗೆ ಪ್ರಶಂಸಾ ಪತ್ರ ಪ್ರದಾನಿಸಿ ಅಭಿವಂದಿಸಿದರು.
ಇಂದಿಲ್ಲಿ ಬುಧವಾರ ಬೋರಿವಿಲಿ ಪೋಯಿಸರ್ ಜಿಮ್ಖಾನಾ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ಕೊರೊನಾ ವಾರಿಯರ್ಸ್ನ ಪೊಲೀಸರ ಸುಮಾರು 12 ಪರಿವಾರಕ್ಕೆ ಧನ ಸಹಾಯ ವಿತರಿಸಿದ್ದು ವೇದಿಕೆಯಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ನ ವಿರೋಧ ಪಕ್ಷ ನಾಯಕ ಪ್ರವೀಣ್ ಧಣೆಕರ್, ಬಿಜೆಪಿ ಧುರೀಣರಾದ ಗಣೇಶ್ ಕಾಣ್ಕರ್, ವಿನೋದ್ ಶ್ಹೆಲಾರ್, ಬಾಬಾ ಸಿಂಗ್, ಕೊಡುಗೈದಾನಿ ಕಲ್ಪೇಶ್ ಶ್ಹಾಆಸೀನರಾಗಿದ್ದರು.
ಮುಂಬಯಿನಲ್ಲಿ ಕೋವಿಡ್ನಿಂದಾಗಿ ಮೃತರಾದ ಪೊಲೀಸರ ಕುಟುಂಬಕ್ಕೆ ಮುಂದೆಯೂ ನಮ್ಮ ಸಹಯೋಗ ನೀಡುವೆವು. ಭವಿಷ್ಯತ್ತಿನಲ್ಲಿ ನಾವೆಲ್ಲರೂ ಕೋವಿಡ್ ವಿರುದ್ಧ ಜನಜಾಗೃತಿಗೈದು ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು. ಕೋವಿಡ್ ಸಂಕಷ್ಟದ ಸಮಯ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಯಾರ್ಯಾರು ಸೇವಾ ನಿರತರಾಗಿದ್ದರೋ ಅವರಿಗೆ ಪಕ್ಷ, ಜಾತಿ, ಧರ್ಮಗಳ ಭೇದಭಾವ ಮಾಡದೆ ಕೋವಿಡ್ ವಾರಿಯರ್ಸ್ ಸೇವಾ ಪುರಸ್ಕಾರ ನೀಡಿ ಗೌರವಿಸುವೆ ಎಂದು ಗೋಪಾಲ್ ಶೆಟ್ಟಿತಿಳಿಸಿದರು. ಪೊಲೀಸ್ ಅಧಿಕಾರಿಗಳ ಅವಿರತ ಸೇವೆ, ನಿಷ್ಠೆ ಮತ್ತು ದಕ್ಷತೆಗೆ ನಾವು ವಂದಿಸುವೆವು.
ಪೊಲೀಸರು ತಮ್ಮ ಆರೋಗ್ಯ ಮತ್ತು ಸ್ವಪರಿವಾರದ ಹಂಗು ತೊರೆದು ಹಗಲಿರುಳು ಸೇವೆಗೈದ ಕಾರಣ ಬೃಹನ್ಮುಂಬಯಿಯ ಕೋಟ್ಯಾಂತರ ಜನವಾಸಿ, ಮಹಾನಗರವು ಸುರಕ್ಷಿತವಾಗಿದೆ. ಇವರ ಪರಿವಾರ ಮತ್ತು ಸೇವಾ ನಿರತ ಎಲ್ಲಾ ಪೊಲೀಸ್ ಅಧಿಕಾರಿಗಳ ಪರಿವಾರಕ್ಕೆ ಜನರ ಸಹಾಯವೂ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಬೃಹನ್ಮುಂಬಯಿ ಪೊಲೀಸರ ಕುಟುಂಬದ ಸಂಕಷ್ಟಕ್ಕೆ ಸಹಾಯ ಮಾಡುವ ಒಂದು ಸಣ್ಣ ಪ್ರಯತ್ನ ಮತ್ತು ನಮ್ಮದೊಂದು ಅಳಿಲಸೇವೆಯಷ್ಟೇ ಎಂದು ಎರ್ಮಾಳ್ಹರೀಶ್ ಶೆಟ್ಟಿತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಬಂಟ್ಸ್ ಸಂಘ ಮುಂಬಯಿ ಇದರ ನೂತನ ಯೋಜನಾ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ಕೊಡುಗೈದಾನಿ ನವೀನ್ ಆಳ್ವಾ, ಸಮಾಜ ಸೇವಕರುಗಳಾದ ಮಂಜುನಾಥ ಬನ್ನೂರು, ಪ್ರಕಾಶ್ ಎ.ಶೆಟ್ಟಿ (ಎಲ್ಐಸಿ), ದಿವಾಕರ್ ಶೆಟ್ಟಿಅಡ್ಯಾರ್, ಕರುಣಾಕರ್ ಶೆಟ್ಟಿ (ಪೋಯಿಸರ್ ಜಿಮ್ಖಾನಾ), ಕಾರ್ತಿಕ ಹರೀಶ್ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.
*ರೋನ್ಸ್ ಬಂಟ್ವಾಳ್

