ಬಂಟ್ವಾಳ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿಯಂತೆ ಶಿಷ್ಯನ ಸಾಧನೆಯ ಹಿಂದೆ ಗುರುವಿನ ಪರಿಶ್ರಮ ಎಂದಿಗೂ ಸ್ಮರಣೀಯ. ಅಧ್ಯಾಪಕರ ಮಾರ್ಗದರ್ಶನದಿಂದ ವಿದ್ಯಾರ್ಥಿಯಾದವನ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಇದಾಗಬೇಕಾದರೆ ಶಿಷ್ಯಾನಾದವನಲ್ಲಿ ಗುರುವಿನ ಕುರಿತು ಸರ್ವ ಸಮರ್ಪಣಾ ಭಾವ ಇರಬೇಕು ಎಂದು ಬಂಟ್ವಾಳ ತಾಲೂಕು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಲಿಕೆ ಎನ್ನುವುದು ನಿರಂತರವಾದುದು. ಅದೇ ಹಾದಿಯಲ್ಲಿ ವಿದ್ಯಾರ್ಥಿ ನಡೆಯಬೇಕು. ಆಗ ಮಾತ್ರ ಸೂಕ್ತ ಪ್ರತಿಫಲ ಪಡೆಯಲು ಸಾಧ್ಯ. ದೇಶ ಗುರು ಹಿರಿಯರ ಕುರಿತು ಗೌರವ ಅತಿ ಮುಖ್ಯ. ನಾಡಿನ, ದೇಶದ ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಉಪನ್ಯಾಸಕಿ ಶಾಂತಿ ರೋಚ್ ಮತ್ತು ಕವಿತಾ ಕೆ. ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ವಂದಿಸಿದರು. ವಿದ್ಯಾರ್ಥಿನಿ ನಿಶ್ಮಿತಾ ಪೈ ಕಾರ್ಯಕ್ರಮ ನಿರೂಪಿಸಿದರು.
