ಮೂಡುಬಿದಿರೆ :ದ.ಕ. ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರ್ ಐ ಡಿ ಎಫ್-23 ಯೋಜನೆಯಡಿ ಬೆಳುವಾಯಿಯಲ್ಲಿ ರೂ.31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪಶುಚಿಕಿತ್ಸಾಲಯದ ನೂತನ ಕಟ್ಟಡವನ್ನು ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನಾ ಕೇಂದ್ರಗಳು ಜಾಸ್ತಿಯಾಗಿವೆ. ಕೃಷಿಗೆ ಸಂಬಂಧಪಟ್ಟ ದನ, ಆಡು ಮತ್ತು ಎತ್ತುಗಳನ್ನು ಸಾಕುವುದರಿಂದ ಅವುಗಳಿಗೆ ಬೇಕಾದ ಸವಲತ್ತುಗಳು ಮತ್ತು ಚಿಕಿತ್ಸೆಯನ್ನು ನೀಡಲು ಅನುಕೂಲಕರವಾಗುವಂತೆ ಪಶುವೈದ್ಯಕೀಯ ಸೇವೆಗಳು ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಇದೀಗ ಇಲ್ಲಿ ಆರಂಭಗೊಂಡಿರುವ ಆಸ್ಪತ್ರೆಯು ಈ ಭಾಗದ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಬೆಳುವಾಯಿ ಗ್ರಾಪಂ ಅಧ್ಯಕ್ಷ ಸೋಮನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸುಸಜ್ಜಿತವಾದ ಆಸ್ಪತ್ರೆ ಆರಂಭಗೊಂಡಿದೆ. ಈ ಆಸ್ಪತ್ರೆಯಿಂದ ಈ ಭಾಗದ ಜನರಿಗೆ ಉತ್ತಮ ಸೇವೆ ಸಿಗಬೇಕಾಗಿದೆ ಆದರೆ ಇಲ್ಲಿ ಪಶು ವೈದ್ಯರ ಕೊರತೆ ಇದ್ದು ಇದನ್ನು ನಿವಾರಿಸಬೇಕೆಂದು ಶಾಸಕರಲ್ಲಿ ವಿನಂತಿಸಿದರು.
ಜಿಪಂ ಸದಸ್ಯೆ ಸುಜಾತ ಕೆ.ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಗ್ರಾಮೀಣ ಭಾಗದ ಜನರು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುತ್ತಾರೆ. ಇವುಗಳಿಗೆ ಸರಕಾರವು ಹಲವಾರು ಸವಲತ್ತುಗಳನ್ನು ನೀಡುತ್ತದೆ. ಈ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ತಾಪಂ ಸದಸ್ಯ ಸಂತೋಷ್, ನಿವೃತ್ತ ಉಪನಿರ್ದೇಶಕ ಡಾ.ಸುಧಾಕರ ಶೆಟ್ಟಿ, ಬೆಳುವಾಯಿ ಪಿಡಿಓ ಭೀಮಾ ನಾಯ್ಕ್ ಹಾಗೂ ಗ್ರಾ.ಪಂ. ಸದಸ್ಯರು ಭಾಗವಹಿಸಿದರು. ಗುತ್ತಿಗೆದಾರ ರಾಘು ಪೂಜಾರಿ ಉಪಸ್ಥಿತರಿದ್ದರು.
ಪಶು ವೈದ್ಯಾಧಿಕಾರಿ ರವಿ ಕುಮಾರ್ ಸ್ವಾಗತಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
