ಬಂಟ್ವಾಳ: ದಡ್ಡಲಕಾಡು ಶಾಲೆಯ ಮಾದರಿಯಲ್ಲಿಯೇ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಗುರುವಾರ ದತ್ತು ಸ್ವೀಕರಿಸಿದೆ.

ಈ ವಿಚಾರವನ್ನು ಕೂಕ್ರಬೆಟ್ಟು ಶಾಲೆಯಲ್ಲಿ ಕರೆದ ವಿಶೇಷ ಸಭೆಯಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸರಕಾರಿ ಶಾಲೆ ಉಳಿಸಿ ಬೆಳಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಘೋಷಿಸಿದ್ದು ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದತ್ತು ಸ್ವೀಕಾರದ ಮನವಿಯನನ್ನು ಸಲ್ಲಿಸಲಾಯಿತು.

ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಳೆದ ವರ್ಷ ್ಲ ಗ್ರಾಮ ವಾಸ್ತವ್ಯ ಮಾಡಿ ಜನಜಾಗೃತಿ ಮೂಡಿಸಲಾಗಿತ್ತು. ಸರಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಸಮಿತಿ ರಚಿಸಿ ಆ ಮೂಲಕ ಶಾಲೆ ಸಮಗ್ರ ಅಭಿವೃದ್ದಿ ಕಾಣುತ್ತಿದ್ದು, ಈ ಶಾಲೆಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶದಿಂದ ದತ್ತು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಗ್ರಾಮೀಣ ಭಾಗವಾಗಿರುವ ಕೂಕ್ರಬೆಟ್ಟುವಿನಲ್ಲಿ ದೂರದ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಕರೆತರಲು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ಬಸ್ ನೀಡುವುದಾಗಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಘೋಷಿಸಿದರು. ಮುಂದಿನ ವರ್ಷ 200ಕ್ಕಿಂತಲೂ ಅಧಿಕ ಮಕ್ಕಳನ್ನು ಶಾಲೆಗೆ ದಾಖಲಿಸುವ ಗುರಿ ಹೊಂದಬೇಕು ಎಂದು ತಿಳಿಸಿದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಸಮಿತಿಯ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷೆ ವಹಿಸಿ ಮಾತನಾಡಿ ಕೂಕ್ರಬೆಟ್ಟು ಶಾಲೆಯ ಮುಂದಿನ ಅಭಿವೃದ್ದಿಗೆ ಬೆಳ್ತಂಗಡಿ ಶಾಸಕರು ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು ಶಾಲೆಯ ಹೊಸ ಕಟ್ಟಡದ ನಿರ್ಮಾಣದ ಕನಸು ಶೀಘ್ರ ನನಸಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಸಮಿತಿಯ ಪ್ರಮುಖರಾದ ನಾರಾಯಣ ಉಚ್ಚೂರು, ಶೈಕ್ಷಣಿಕ ಸಲಹೆಗಾರ ದಿವಾಕರ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಹಾರೊದ್ದು, ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ, ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಇಸ್ರೇಲ್ ಸಮಿತಿ ಸಂಚಾಲಕ ಸತೀಶ್ ಪೂಜಾರಿ ಉಚ್ಚೂರು, ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸುಫಲ ಸ್ವಾಗತಿಸಿದರು, ಬಾಲಕೃಷ್ಣ ಬಂಗೇರ ವಂದಿಸಿದರು.
