ಬಂಟ್ವಾಳ : ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಗೆ 2017 ರಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು 10 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ಇಲ್ಲಿ ಕಾಮಗಾರಿ ಅನುಷ್ಠಾನಗೊಂಡು ಮಾಡಲಾಗಿದ್ದ ಶಿಲಾನ್ಯಾಸದ ಶಿಲಾಕಲ್ಲನ್ನು ಕಿಡಿಗೇಡಿಗಳು ದ್ವಂಸಗೊಳಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಖಂಡನೆ:
ಕಿಡಿಗೇಡಿ ಕೃತ್ಯವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಖಂಡಿಸಿದ್ದು,ರಮಾನಾಥ ರೈ ಅವಧಿಯ ಬಳಿಕ ಬಂದ ಬಿಜೆಪಿ ಶಾಸಕರಿಂದ ಕ್ಷೇತ್ರದಲ್ಲಿ ಒಂದೇ ಒಂದು ಜನಪರ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ರೈಯವರಾ ಅಭಿವೃದ್ದಿ ಕಾರ್ಯಗಳ ಕುರುಹುಗಳನ್ನು ಹಾನಿಗೊಳಿಸುವಂತ ನೀಚ ಕೃತ್ಯಕ್ಕೆ ಇಳಿಯಲಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ. ರಾಯಿಯಲ್ಲಿ ನಡೆಸಿರುವ ಈ ಕೃತ್ಯ ಇಲ್ಲಿನ ಗಿರಿಜನ ಸಮುದಾಯಕ್ಕೆ ಹಾಗೂ ಈ ಭಾಗದ ಸಾರ್ವಜನಿಕರಿಗೆ ಮಾಡಿದ ಅವಮಾನ ಎಂದು ಬೇಬಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದು,ಈ ಘಟನೆ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯವಾಗಿದೆ ಎಂದಿದ್ದಾರೆ.
