ಮೂಡುಬಿದಿರೆ : ಜ್ಞಾನ, ಕಲಿಕೆಯ ಸಾಮಥ್ರ್ಯದ ಜೊತೆಗೆ ಸಾಮಾನ್ಯ ಜ್ಞಾನ ವಿದ್ಯಾರ್ಥಿಗಳಲ್ಲಿರಬೇಕು. ನಮ್ಮ ಆತ್ಮವಿಶ್ವಾಸಕ್ಕೆ ಅನುಗುಣವಾಗಿ ನಮ್ಮ ಸಾಮಥ್ರ್ಯ ಹೆಚ್ಚುತ್ತದೆ ಮಾತ್ರವಲ್ಲ, ಅವಕಾಶಗಳು ತೆರೆದುಕೊಳ್ಳುತ್ತದೆ. ವಿದ್ಯಾರ್ಥಿ ಜೀವನದಲ್ಲಿ ತಮ್ಮ ಗುರಿಯ ಕಡೆಗಿನ ಸ್ಪಷ್ಟ ನಿಲುವು, ಅದಕ್ಕೆ ಪೂರಕವಾಗಿ ಬೆಳೆಸುಕೊಳ್ಳುವ ಸಾಮಥ್ರ್ಯ ಮುಂದೆ ಔದ್ಯೋಗಿಕ ಕ್ಷೇತ್ರದಲ್ಲಿ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎಂದು ಬೆಂಗಳೂರು ಜಿಂದಾಲ್ ನೇಚರ್ ಕ್ಯೂರ್ ಇನ್ಸ್ಟ್ಯೂಟ್ನ ಸಹ ಮುಖ್ಯ ಮೆಡಿಕಲ್ ಅಧಿಕಾರಿ ಡಾ.ಬಬಿನಾ ಎನ್.ಎಂ ಹೇಳಿದರು.

ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಶನಿವಾರ ನಡೆದ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಸ್ಯೆಗಳು ಎದುರಾದಾಗ ಅದನ್ನು ಬಿಟ್ಟು ಸಾಧನೆ ಮಾಡುವುದಲ್ಲ, ಸಮಸ್ಯೆ, ಸೋಲನ್ನು ಸಮರ್ಥವಾಗಿ ಎದುರಿಸಿ ನಮ್ಮ ಗುರಿಯನ್ನು ಸಾಧಿಸುವುದು ನಿಜವಾದ ಸಾಧನೆ. ನ್ಯಾಚುರೋಪಥಿ ಸಹಿತ ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ವಿಫುಲವಾದ ಅವಕಾಶಗಳಿವೆ. ರೋಗಿಯ ಮನಸ್ಸು, ದೇಹ ಎರಡನ್ನು ಸ್ವಾಸ್ಥ್ಯಗೊಳಿಸುವುದು ನ್ಯಾಚುರೋಪಥಿಯ ವಿಶೇಷತೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, 17 ವರ್ಷಗಳ ಹಿಂದೆ ರಾಜ್ಯದಲ್ಲೇ ಎರಡನೇ ಸಂಸ್ಥೆಯಾಗಿ ಆಳ್ವಾಸ್ ನ್ಯಾಚುರೋಪಥಿ ಪ್ರಾರಂಭವಾಯಿತು. ಸಂಸ್ಥೆ ಪ್ರಾರಂಭಿಸಿ, ಮುನ್ನಡೆಸಲು ಶ್ರೀಕ್ಷೇತ್ರ ಧರ್ಮಸ್ಥಳ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪ್ರೇರಣೆ. ನ್ಯಾಚುರೋಪಥಿ ಸಹಿತ ಪರ್ಯಾಯ ಆರೋಗ್ಯ ವಿಜ್ಞಾನಕ್ಕೆ ಜಾಗತಿಕಮಟ್ಟದಲ್ಲಿ ಬೇಡಿಕೆ ಇದೆ. ಯಾವುದೇ ಆರೋಗ್ಯ ವಿಜ್ಞಾನದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವೈದ್ಯರು ಸಂಕುಚಿತ ಮನೋಭಾವನೆ ಬಿಟ್ಟು, ಕೊಡುಕೊಳ್ಳುವಿಕೆಯ ಮನೋಭಾವನೆ ಬೆಳೆಸಿಕೊಂಡಲ್ಲಿ ರೋಗಿಗೆ ಸೂಕ್ತ ಸಮಯದಲ್ಲಿ ಉತ್ತಮ ಆರೈಕೆ ಮಾಡಬಹುದು ಎಂದರು.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಯೋಗಿಕ್ ಸೈನ್ಸ್ ಡೀನ್ ವೃಂದಾ ಸ್ವಾಗತಿಸಿದರು. ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ವರದಿ ವಾಚಿಸಿದರು. ಡಾ.ಅರ್ಚನಾ ಪದ್ಮನಾಭ್ ಬಹುಮಾನ ವಿಜೇತರ ವಿವರ ನೀಡಿದರು. ದೀಕ್ಷಾ ಗೌಡ ಯು. ಕಾರ್ಯಕ್ರಮ ನಿರೂಪಿಸಿದರು. ಡಾ.ನಿತೇಶ್ ಗೌಡ ಅತಿಥಿ ಪರಿಚಯ ಮಾಡಿದರು. ಡಾ.ದೀಪಕ್ ವಂದಿಸಿದರು.
