ಕುಪ್ಪೆಪದವು :ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಂಡವಾಳ ಶಾಹಿಗಳ ಪರವಾಗಿ ನಿಂತು, ದುಡಿಯುವ ಬಡ ಕಾರ್ಮಿಕ ವಿರೋಧಿ ನಿಲುವುಗಳಿಂದಾಗಿ, ಕಾರ್ಮಿಕರು, ಉದ್ಯೋಗ ಕಳೆದು ಕೊಂಡು ಅತಂತ್ರ ಸ್ಥಿತಿ ತಲುಪಿದ್ದಾರೆ ಎಂದು ಕಾರ್ಮಿಕ ಮುಖಂಡ ಯೋಗೀಶ್ ಜಪ್ಪಿನಮೊಗರು ಹೇಳಿದ್ದಾರೆ.
ಅವರು ಆದಿತ್ಯವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ, ಕುಪ್ಪೆಪದವು ಪಂಚಾಯತ್ ಸಭಾ ಭವನದಲ್ಲಿ ನಡೆದ, ಕುಪ್ಪೆಪದವು ವಲಯ ಮಟ್ಟದ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು ಬಂಡವಾಳ ಶಾಹಿಗಳಿಗೆ 143 ಲಕ್ಷ ಕೋಟಿ ರೂಪಾಯಿ ನೀಡುವ ಸರಕಾರ, ದುಡಿಯುವ ಬಡಕಾರ್ಮಿಕರಿಗೆ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಾಗೀಕರಣ ಮಾಡುವ ಮೂಲಕ ಅವುಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರನ್ನು ಅತಂತ್ರ ಗೊಳಿಸಿದೆ, ತಪ್ಪು ಆರ್ಥಿಕ ನೀತಿಗಳಿಂದ ಉತ್ಪಾದನಾ ವಲಯ ಪಾತಾಳಕ್ಕೆ ಕುಸಿದಿದ್ದು, ಕಾರ್ಮಿಕರು, ಬಡವರು ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿದ್ದಾರೆ