ಉಡುಪಿ: ಉಡುಪಿ ಜಿಲ್ಲೆಯು ಅಪರಿಚಿತ ಮಾನಸಿಕ ರೋಗಿಗಳ ಬೀಡಾಗಿದ್ದು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಇದುವರೆಗೆ ನೂರಾರು ಮಹಿಳಾ- ಪುರುಷ ಮಾನಸಿಕ ರೋಗಿಗಳ ರಕ್ಷಿಸಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶ್ವಸಿಯಾಗಿದ್ದಾರೆ. ಈಗ ಅವರು ಮತ್ತೊಂದು ಅಸಹಾಯಕ ಮಾನಸಿಕ ಮಹಿಳೆಯ ರಕ್ಷಿಸಿ ಸುರಕ್ಷಿತವಾಗಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗಿಗಳ ಚಿಕಿತ್ಸೆಗೆ ಮೂಲಸೌಕರ್ಯ ಇಲ್ಲದ್ದು, ಇಲಾಖೆಗಳು, ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು, ಬುದ್ದಿವಂತರ ಜಿಲ್ಲೆ ಮಾನಸಿಕ ಅಸ್ವಸ್ಥರ ತಾಣವಾಗಲು ಮುಖ್ಯ ಕಾರಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಉಡುಪಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ನಗರದ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿತ್ತು. ಇದೀಗ 28 ದಿನಗಳ ಚಿಕಿತ್ಸೆಗೆ ಚೇತರಿಸಿ ಕೊಂಡ ಮಹಿಳೆಯನ್ನು, ವಿಶು ಶೆಟ್ಟಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ. ಬಳಿಕ ದಿಕ್ಕಿಲ್ಲದ ಮಹಿಳೆಯನ್ನು ವಿಶು ಶೆಟ್ಟಿ ಅವರು ಮಹಿಳಾ ಸಹಾಯವಾಣಿ ಸಿಬ್ಭಂದಿ, ಹಾಗೂ ಮಹಿಳಾ ಪೊಲೀಸರ ನೆರವಿನ ಮೂಲಕ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ, ಸುರಕ್ಷಿತ ನೆಲೆ ಕಲ್ಪಿಸಿ ಮಾನವಿಯತೆ ಮರೆದಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಪಟ್ಟ ಮಹಿಳೆ ಶೌಚಾದಿಗಳನ್ನು ಉಟ್ಟ ಬಟ್ಟೆಗಳಲ್ಲೆ ಮಾಡಿಕೊಳ್ಳುತ್ತಿದ್ದಳು. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ನಡೆದಾಡಿಕೊಂಡು ಸಾಗುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲಿದ್ದ ಮಹಿಳೆಯನ್ನು ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆಯ ವ್ಯವಸ್ಥೆಗೊಳಿಸಿ, ನೊಂದ ಮಹಿಳೆಯನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಲೋಚನೆ ವೇಳೆ ಮಹಿಳೆ ಪಿಂಕಿ (27 ವ) ಮಿಡ್ನಾಪುರ, ಗಂಡ ಮೃತ ಪಟ್ಟಿದ್ದಾನೆ. ಒರ್ವ ಮಗಳಿದ್ದಾಳೆ ಎಂಬ ಅಸ್ವಷ್ಟ ಮಾಹಿತಿಯನ್ನು ಮಹಿಳೆ ನೀಡಿದ್ದಾಳೆಂದು ತಿಳಿದು ಬಂದಿದೆ. ಮಹಿಳೆಯ ಚಿಕಿತ್ಸೆಗೆ ಒಟ್ಟು 28 ಸಾವಿರ ರೂಪಾಯಿ ತಗುಲಿದೆ. ಮಾಧ್ಯಮದ ಮೂಲಕ ವಿಷಯ ತಿಳಿದ ವಿಶು ಶೆಟ್ಟಿಯವರ ಅಭಿಮಾನಿಯೋರ್ವರು 17 ಸಾವಿರ, ವಿಶು ಶೆಟ್ಟಿಯವರು 11 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ.
ಯಾವೊದೋ ಮಾನಸಿಕ ಆಘಾತಕ್ಕೆ ಸಿಲುಕಿ ಮಹಿಳೆ ಮಾನಸಿಕವಾಗಿ ಕುಗ್ಗಿರಬಹುದು. ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳು ನೊಂದ ಮಹಿಳೆ ಪಿಂಕಿಯನ್ನು ಮನೆಗೆ ಸೇರಿಸುವ ವ್ಯವಸ್ಥೆ ಮಾಡಬೇಕೆಂದು ವಿಶು ಶೆಟ್ಟಿ ಅವರು ಆಗ್ರಹಿಸಿದ್ದಾರೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ಬೇಕಾದ ಚಿಕಿತ್ಸಾ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಇಲ್ಲದೆ, ಮಾನಸಿಕ ರೋಗಿಗಳೆಲ್ಲರು ರಸ್ತೆಗಳಲ್ಲಿ ದಿನ ಕಳೆಯ ಬೇಕಾದ ಹಿನಾಯ ಪರಿಸ್ಥಿತಿ ಜಿಲ್ಲೆಯಲ್ಲಿ ಪ್ರತಕ್ಷವಾಗಿದೆ. ಮಾನಸಿಕ ಖಿನ್ನತೆಗೆ ಒಳಪಟ್ಟ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯಲು, ಲೈಂಗಿಕ ಮಾರಕ ರೋಗಗಳು ಪರಿಸರದಲ್ಲಿ ಹರಡಲು ಬಹಳಷ್ಟು ಸಾದ್ಯತೆ ಇದೆ. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸ ಬೇಕಾದ ಇಲಾಖೆಗಳು ಕಣ್ಣಿದ್ದು ಕುರುಡರಾಗಿವೆ. ಸರಕಾರಕೈ ಸಾರ್ವಜನಿಕ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸುವ ಕಾಳಜಿಯಿಲ್ಲ. ಆಡಳಿತ ವ್ಯವಸ್ಥೆಗಳು ನಾಗರಿಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಜನ ಸಾಮಾನ್ಯನ ಗತಿ ಏನು..! ಎಂದು ವಿಶು ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

