ಕೈಕಂಬ:ಮೂಲರಪಟ್ನ ಸೇತುವೆ ಮುರಿದು ವರ್ಷ ಸಂದರೂ ಹೊಸ ಸೇತುವೆಯ ನಿರ್ಮಾಣದ ಬಗ್ಗೆ ಯಾವಿದೇ ಕಾಮಗಾರಿ ಪ್ರಾರಂಭವಾಗದ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಸರಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಳು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಸಮಿತಿಯನ್ನು ರಚಿಸಲು ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಮುತ್ತೂರು, ಕುಳವೂರು, ಕಿಲೆಂಜಾರು ಬಡಗಬೆಳ್ಳೂರು ಮತ್ತು ಮೂಲರ ಪಟ್ನದ ಸಮಾನ ಮನಸ್ಕರು ಕಳೆದ ಭಾನುವಾರ ಸಭೆಸೇರಿ ಈ ಬಗ್ಗೆ ತೀರ್ಮಾನಿಸಿದ್ದು ಮುಂದಿನ ಅದಿತ್ಯವಾರ ಬೆಳಿಗ್ಗೆ ಮುತ್ತೂರು ಶಾಲೆಯಲ್ಲಿ 5 ಗ್ರಾಮಗಳ ಗ್ರಾಮಸ್ಥರು ಸಭೆ ಸೇರಿ ಹೋರಾಟ ಸಮಿತಿಯನ್ನು ಅಸ್ಥಿತ್ವಕ್ಕೆ ತಂದು ಸೇತುವೆಗಾಗಿ ಪ್ರತಿಭಟನೆಯು ಸೇರಿದಂತೆ ಸಾಧ್ಯವಿರುವ ಎಲ್ಲಾ ರೀತಿಯಿಂದ ಒತ್ತಡ ತರಲು ನಿರ್ಧರಿಸಲಾಗಿದೆ. ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದ ರಮೀಜ್ ಕುಪ್ಪೆಪದವು ಜಿಲ್ಲಾ ರಸ್ತೆಯ ಪ್ರಮುಖ ಸೇತುವೆ ಮುರಿದು ಬಿದ್ದು ಒಂದು ವರ್ಷವಾದರೂ ಹೊಸ ಸೇತುವೆ ನಿರ್ಮಾಣದ ಬಗೆಗಿನ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಸೇತುವೆ ಮುರಿದು ಜನಸಾಮಾನ್ಯರು, ವಿದ್ಯಾರ್ಥಿಗಳು ಭಾರಿ ತೊಂದರೆಗೆ ಸಿಲುಕಿದ್ದಾರೆ.
ನಮ್ಮ ಸಂಕಷ್ಟವನ್ನು ಜನಪ್ರತಿನಿಧಿಗಳಿಗೆ ಸರಕಾರದ ಗಮನಕ್ಕೆ ತರಬೇಕಾದರೆ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಹೋರಾಟ ಸಮತಿ ಸ್ಥಾಪನೆಯ ಅನಿವಾರ್ಯತೆಯನ್ನು ವಿವರಿಸಿದರು. ಗೋಪಾಲ ಮುತ್ತೂರು, ಅಹಮ್ಮದ್ ಬಾವ ಕುಪ್ಪೆಪದವು, ಯೋಗೀಶ್ ಬಿಕ್ಕೋಡ್, ಶರೀಫ್, ಆಸೀಪ್ ಮೂಲರಪಟ್ನ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಳೆದ ವರ್ಷ ಜೂನ್ ತಿಂಗಳ 25ರಂದು ಏಕಾಏಕಿ ಮೂಲರಪಟ್ನ ಸೇತುವೆ ಕುಸಿದ್ದು ಬಿದ್ದು ಬಂಟ್ವಾಳ ಮತ್ತು ಗಂಜಿಮಠ ಕುಪ್ಪೆಪದವು ಸಂಪರ್ಕ ಕಡಿತಗೊಂಡಿತ್ತು ಇದರಿಂದಾಗಿ ಈ ಭಾಗದ ಜನರು ಇಲ್ಲಿರುವ ತೂಗುಸೇತುವೆಯ ಮೂಲಕ ನದಿದಾಟುತ್ತಿದ್ದಾರೆ.

