ಮೂಡುಬಿದಿರೆ: ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ದಾನಿಗಳ ಸಹಕಾರದಿಂದ ಕೊಡಮಾಡಿದ ಸುಮಾರು 40 ಸಾವಿರ ಮೊತ್ತದ ಬರೆಯುವ ಪುಸ್ತಕಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ವಿದ್ಯಾರ್ಥಿಗಳಿಗೆ ವಿತರಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದ ಸವಲತ್ತುಗಳ ಜತೆಗೆ ದಾನಿಗಳ ನೆರವು ಸಿಗುತ್ತಿರುವುದು ಶ್ಲಾಘನಾರ್ಹ. ಮಕ್ಕಳು ಈ ಎಲ್ಲಾ ಸೌಲಭ್ಯಗಳನ್ನು ಪಡೆದು ಕಲಿಕೆಯಲ್ಲಿ ಮುಂದೆ ಬರಬೇಕು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆಯು ಆಸಕ್ತಿ ವಹಿಸಿ ದೇಶದಲ್ಲಾಗುತ್ತಿರುವ ಬದಲಾವಣೆಗೆ ಸ್ಪಂದಿಸಬೇಕು. ಭವಿಷ್ಯದಲ್ಲಿ ನೀವು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ದಾನಿಗಳಾಗಿ ಮೂಡಿಬರಬೇಕು ಎಂದರು.
ಪುರಸಭೆ ಸದಸ್ಯರಾಗಿ ಆಯ್ಕೆಯಾದ ಶಾಲೆಯ ಗೌರವ ಶಿಕ್ಷಕಿ ಸ್ವಾತಿ ಶಿವಾನಂದ ಪ್ರಭು ಮಾತನಾಡಿ `ಮೈನ್ ಶಾಲೆಯಲ್ಲಿ ಒಂದನೇ ತರಗತಿಯಿಂದಲೆ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಸರ್ಕಾರದಿಂದ ಅನುಮತಿ ದೊರಕಿಸಿಕೊಡಲು ಶಾಸಕರ ಮೂಲಕ ಪ್ರಯತ್ನಿಸುವುದಾಗಿ ತಿಳಿಸಿದ ಅವರು, ನಾನು ಪುರಸಭೆ ಸದಸ್ಯೆಯಾಗಿ ಆಯ್ಕೆಯಾದರು ಶಾಲಾ ಆವರಣ ಪ್ರವೇಶಿಸಿದ ಮೇಲೆ ಶಿಕ್ಷಕಿಯಾಗಿಯೆ ಇರುತ್ತೇನೆ, ಪುರಸಭೆ ಮೂಲಕ ಶಾಲಾ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತೇನೆ ಎಂದರು.
ದೊಡ್ಮನೆ ಫ್ರೆಂಡ್ಸ್, ಅಲ್ಲದೆ ಮುರಳಿ ಕಾಯ್ಕಿನಿ, ಸುಧೀರ್ ಪ್ರಭು, ಗಿರಿ ಕನ್ಸ್ಟ್ರಕ್ಷನ್ನ ಗಿರೀಶ್, ಪದ್ಮನಾಭ ಪ್ರಭು ಮತ್ತಿತರರ ದಾನಿಗಳ ಸಹಕಾರದಿಂದ ಬರೆಯುವ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ದಾನಿ ಶಿವಾನಂದ ಪ್ರಭು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ದಾನಿ ಹರೀಶ್ ಪಿ. ಉಪಸ್ಥಿತರಿದ್ದರು. ಮುಖ್ಯೋಪಧ್ಯಾಯಿನಿ ಅನುಸೂಯ ಸ್ವಾಗತಿಸಿದರು. ಶಿಕ್ಷಕಿ ಸತ್ಯಾವತಿ ನಿರೂಪಿಸಿದರು. ಶಿಕ್ಷಕಿ ಪ್ಲಾವಿಯ ವಂದಿಸಿದರು.
