ಬಂಟ್ವಾಳ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಬಿ.ಸಿ.ರೋಡಿನಲ್ಲಿ ಫ್ಲೈಓವರ್ ಕೆಳಗಿಳಿಯುವ ಹಾಗೂ ಸರ್ವೀಸ್ ರೋಡ್ ಹೆದ್ದಾರಿಗೆ ಸಂಧಿಸುವ ಜಾಗದಲ್ಲಿ ಬೈಕೊಂದು ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದ್ದು, ಬೈಕ್ ಸವಾರ ಶರೀಫ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರ್ವಿಸ್ ರಸ್ತೆ ಹೆದ್ದಾರಿಗೆ ಸಂಧಿಸುವ ಉದಯ ಲಾಂಡ್ರಿಯ ಮಂಭಾಗ ಬಂಟ್ವಾಳ ಟ್ರಾಫಿಕ್ ಪೊಲೀಸರ ತಂಡ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ತಪಾಸಣೆ ನಡೆಸುತ್ತಿದ್ದರು, ಫ್ಲೈಓವರ್ ನಿಂದ ವಾಹನಗಳು ಎಂದಿನಂತೆ ವೇಗದಲ್ಲಿ ಇಳಿಯುವ ಸಂದರ್ಭ ಪೊಲೀಸರು ತಪಾಸಣೆಗೆಂದು ನಿಲ್ಲಿಸುತ್ತಾರೆ. ಈ ಸಂದರ್ಭ ವಾಹನಗಳು ಎಡಕ್ಕೆ ನಿಲ್ಲಬೇಕಿದ್ದು, ಅದರ ಹಿಂದೆ ಇರುವ ವಾಹನಗಳೂ ವೇಗನಿಯಂತ್ರಣ ಮಾಡುವ ಸಂದರ್ಭ ಗೊಂದಲಕ್ಕೊಳಗಾಗುತ್ತಾರೆ. ಫ್ಲೈಓವರ್ ಇಳಿಯುವ ಜಾಗದಲ್ಲೇ ಪೊಲೀಸ್ ಪಡೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ವಾಹನವೊಂದನ್ನು ತಡೆಯುವ ವೇಳೆ ಬೈಕೊಂದು ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಈ ಸಂದರ್ಭ ರಿಕ್ಷಾ ಮೇಲ್ಸೆತುವೆಯ ತಡೆಗೋಡೆಗೆ ಬಡಿದು ಉರುಳಿಬಿದ್ದಿದ್ದು ಬೈಕ್ ಹಾಗೂ ರಿಕ್ಷಾನುಜ್ಜುಗುಜ್ಜಾಯಿತು.ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಶರೀಫ್ ವಾಹನ ತಪಾಸಣೆಯನ್ನು ಗಮನಿಸಿ ತಪ್ಪಿಸಿಕೊಳ್ಳುವ ಭರದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ.ಆದರೆ ವಾಹನ ತಪಾಸಣೆಯ ವೇಳೆ ಪೊಲೀಸರ ಎಡವಟ್ಟಿನಿಂದ ಅಪಘಾತ ಸಂಭವಿಸಿಲ್ಲ ಎಂದು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ ಐ ಸಮಜಾಯಿಷಿ ನೀಡಿದ್ದಾರೆ. 
ಸಾರ್ವಜನಿಕರ ಆಕ್ರೋಶ:
ಈ ಘಟನೆ ನಡೆದ ಸಂದರ್ಭ ಸಾರ್ವಜನಿಕರು ಜಮಾಯಿಸಿ, ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಘಟನೆಯ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಟ್ರಾಫಿಕ್ ಪೊಲೀಸರ ವಿರುದ್ದದ ಟೀಕೆ ,ಆಕ್ರೋಶದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲೆಂದರಲ್ಲಿ ಕದ್ದುಮುಚ್ಚಿ ವಾಹನ ತಪಾಸಣೆಗೆಂದು ನಿಲುಗಡೆಗೊಳಿಸುವ ಕಾರಣವೇ ಈ ರೀತಿಯ ಅಪಘಾತಗಳು ಸಂಭವಿಸುತ್ತವೆ ಎಂದು ದೂರಲಾಗಿದೆ. ಟ್ರಾಫಿಕ್ ಪೊಲೀಸರು ತಮ್ಮ ಪರಿಚಯಸ್ಥರ ದ್ವಿಚಕ್ರ ಅಥವಾ ಇತರ ವಾಹನಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೂ ಅವರನ್ನು ನಿಲ್ಲಿಸಿ ಕೇಸ್ ದಾಖಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ.
ಕಳೆದ ವಾರ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಲ್ಲಿ ವಾಹನ ತಪಾಸಣೆಯನ್ನು ನಡೆಸುವ ಸಂದರ್ಭ ಟ್ರಾಫಿಕ್ ಜಾಮ್ ಆಗುವಷ್ಟರಮಟ್ಟಿಗೆ ಇಕ್ಕಟ್ಟಿನ ಜಾಗವನ್ನು ಪೊಲೀಸರು ಆಯ್ದುಕೊಂಡಿದ್ದರು ಎಂದು ಈ ಸಂದರ್ಭ ಸಾರ್ವಜನಿಕರು ದೂರಿದರು. ಇದೇ ರೀತಿ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಪೊಳಲಿ ಕಡೆಗೆ ತೆರಳುವ ಖಾಸಗಿ ಬಸ್ ಗಳು ಐದರಿಂದ ಹತ್ತು ನಿಮಿಷಗಳ ಕಾಲ ನಿಂತಲ್ಲೇ ನಿಲ್ಲುತ್ತವೆ.ಆಗ ಟ್ರಾಫಿಕ್ ಜಾಮ್ ಕೂಡ ಅಗುತ್ತವೆ.ಆದರೆ ಈ ಸ್ಥಳದಲ್ಲಿ ಕರ್ತವ್ಯದಲ್ಲಿರುವ ಟ್ರಾಫಿಕ್ ಸಿಬಂದಿಗಳಾಗಲಿ ಅಥವಾ ಇದೇ ಸ್ಥಳದಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗುವ ಟ್ರಾಫಿಕ್ ಎಸ್ ಐ,ಸಿಬಂದಿಗಳು ಈ ಬಸ್ ಗಳ ವಿರುದ್ದ ಕೇಸ್ ಹಾಕುವುದು ಬಿಡಿ ಅದರ ಹತ್ತಿರಕ್ಕೂ ಸುಳಿಯುತ್ತಿಲ್ಲ,ಕೆಎಸ್ ಆರ್ ಟಿ ಸಿ ಬಸ್ ಗಳನ್ನೇ ತೆರಳಲು ಸೂಚಿಸುತ್ತಾರೆ. ಇದರಿಂದಾಗಿ ಇಲ್ಲಿ ವಾಹನದಟ್ಟಣೆ ಪ್ರತಿದಿನ ಆಗುತ್ತಿದ್ದು, ಈ ಬಸ್ ಗಳ ವಿರುದ್ದ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
