ಪೊಳಲಿ:ದುರ್ಗಾ ಎಂದರೆ ಕೋಟೆ ಎಂದರ್ಥ. ದುಷ್ಟ ನಿಗ್ರಹಕಾರಿ ದುರ್ಗಾ ಮಾತೆಯಿಂದಾಗಿ ಸಜ್ಜನ ಭಕ್ತರಿಗೆ ಅನುಗ್ರಹ ಸಿಗುತ್ತದೆ. ದುರ್ಗಾ ಒಡತಿಯಾಗಿರುವ ದುರ್ಗಾಪರಮೇಶ್ವರಿ ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕೆಂಬ ಪಾಠವನ್ನು ಕಲಿಸುತ್ತಾಳೆ. ನಾವೆಲ್ಲಾ ಸಂಘಟಿತರಾದರೆ ದುಷ್ಟರ ನಿಗ್ರಹವನ್ನು ಸುಲಭವಾಗಿ ಮಾಡಬಹುದು. ಶ್ರೀದುರ್ಗಾ ದೇವಿಯ ಸಾನಿಧ್ಯ ಇರುವ ಕ್ಷೇತ್ರವು ಅತ್ಯಂತ ಪಾವಿತ್ರಿತ ಕ್ಷೇತ್ರವಾಗಿದ್ದು, ದೇವಿಯ ಅನುಗ್ರಹ ಖಂಡಿತಾ ಸಿಗುತ್ತದೆ ಎಂದು ಪೇಜಾವರ ಅಧೋಕ್ಷಕ ಮಠ ಉಡುಪಿ ಇದರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಿಸಿದ್ದಾರೆ.
ಅವರು ಮಾ.10ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ವಿದ್ವಾನ್ ಪಂಜ ಭಾಸ್ಕರ್ ಭಟ್, ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವನ್ನು ಸುರಥ-ಸಮಾಧಿ ಎಂಬವರು ನಿರ್ಮಿಸಿದವರೆಂದು ಪುಳಿನಾಪುರ ಮಹಾತ್ಮೆಯಲ್ಲಿ ಉಲ್ಲೇಖವಿದೆ. ಅನಾದಿ ಕಾಲದ ದೇವಸ್ಥಾನವಾಗಿರುವುದರಿಂದ ಇದು ಅತ್ಯಂತ ಕಾರಣಿಕ ಕ್ಷೇತ್ರವಾಗಿರುವುದಷ್ಟೇ ಅಲ್ಲದೆ ಅತ್ಯಂತ ಜಾಗೃತಾವಸ್ಥೆಯ ದೇವಸ್ಥಾನವಾಗಿದೆ.
ಜಾಗೃತ ಸ್ಥಿತಿಯಲ್ಲಿರುವ ಸನ್ನಿಧಾನವನ್ನು ಸರಿಯಾದ ರೀತಿಯಲ್ಲಿ ಸುಸ್ಥಿಗೆ ತಂದರೆ ಅದರಿಂದ ಅನುಗ್ರಹ ಸಿಗುತ್ತದೆ. ಲೋಪವಾಗಿದ್ದರೆ ಅನುಗ್ರಹ ಸಿಗುವುದಿಲ್ಲ. ಪೊಳಲಿಯನ್ನು ಕಲಾತ್ಮಕವಾಗಿ ನಿರ್ಮಿಸಿರುವುದಷ್ಟೇ ಅಲ್ಲದೆ ಶಾಶ್ರೋಕ್ತವಾಗಿ ಪ್ರತಿಷ್ಠೆ ನಡೆಸಿರುವುದರಿಂದ ದೇವರ ಅನುಗ್ರಹ ಸಿಗುತ್ತದೆ ಎಂದರು.
ಕಟೀಲು ಅಸ್ರಣ್ಣ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತಾಡಿ, ದೇವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಪೊಳಲಿಯ ಬ್ರಹ್ನಕಲಶವೇ ಸಾಕ್ಷಿ. ಯಾಕೆಂದರೆ ಅತ್ಯಂತ ಯಶಸ್ವಿಯಾಗಿ ಇಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.
ಭಕ್ತಿ ಶ್ರದ್ಧೆಯಿಂದ ದೇವರನ್ನು ಪ್ರಾರ್ಥಿಸಿದರೆ ದೇವರು ಅನುಗ್ರಹಿಸುತ್ತಾರೆ. ದೇವಿ ಎಲ್ಲರಿಗೂ ಶಾಂತಿ ನೆಮ್ಮದಿಯಿಂದ ಬಾಳುವಂತೆ ಅನುಗ್ರಹಿಸಲಿ. ಸತ್ಕರ್ಮದಿಂದ ಬಾಳುವಂತೆ ಮಾಡಲಿ ಎಂದು ಹಾರೈಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಾರ್ಕಳ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮೊಕ್ತೇಸರ ಮಂಜಯ್ಯ ಶೆಟ್ಟಿ, ಯು.ಟಿ ಆಳ್ವ, ಮಾಜಿ ಸಚಿವ ರಮಾನಾಥ ರೈ, ಚೇರ ಸೂರ್ಯನಾರಾಯಣ ರಾವ್, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷ್ಣಾನಂದ ಹೊಳ್ಳ, ಕಾಷ್ಠ ಶಿಲ್ಪಿ ಶ್ರೀಪತಿ ಆಚಾರ್ಯ, ವಿದ್ಯುತ್ ಗುತ್ತಿಗೆದಾರ ಭಾಸ್ಕರ್ ಭಟ್ ಕಲ್ಲಿನ ಶಿಲ್ಪಿ ಕುಬೇರ ಅವರನ್ನು ಸನ್ಮಾನಿಸಲಾಯಿತು.




