ಉಡುಪಿ: ಪೋಲಾಗುತ್ತಿರುವ ಅಮೂಲ್ಯ ಜೀವಜಲವನ್ನು ಬಳಕೆ ಮಾಡುವ ಮೂಲಕ, ನೀರಿನ ಮಹತ್ವದ ಕುರಿತಾದ ಸಂದೇಶವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು, ನಗರಸಭೆಗೆ ಮನವರಿಕೆಯಾಗಲು ಅಣುಕು ಪ್ರದರ್ಶನವನ್ನು ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ಶುಕ್ರವಾರ ನಡೆಸಿದರು.
ಕಳೆದ ಒಂದು ವಾರದಿಂದ ನಗರದಲ್ಲಿ ವಿತರಣೆಯಾಗುವ ಕುಡಿಯುವ ನೀರಿನ ಪೈಪು ಬಿರುಕು ಬಿಟ್ಟಿದರಿಂದ ನೀರು ಪೋಲಾಗುತ್ತಿರುವುದು ಕಂಡು ಬಂದಿದೆ. ಸ್ಥಳಿಯರು ಸಂಬಂಧ ಪಟ್ಟವರಿಗೆ ದುರಸ್ಥಿಪಡಿಸುವಂತೆ ದೂರು ನೀಡಿದರೂ ಅಧಿಕಾರಿಗಳು ಮೌನರಾಗಿರುದನ್ನು ಕಂಡ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಪೋಲಾಗುತ್ತಿರುವ ನೀರನ್ನು ಬಳಸಿಕೊಂಡು ತಮ್ಮ ಕೊಳಕಾದ ದ್ವಿಚಕ್ರವನ್ನು ತೊಳೆದು, ಜೀವಜಲ ಅಮೂಲ್ಯ ಎನ್ನುವ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದ್ದಾರೆ. ಚರಂಡಿ ಸೇರಿ ಪೋಲಾಗುತ್ತಿರುವ ನೀರನ್ನು ಪಾರಿವಾಳಗಳು ಕುಡಿದು ದಾಹ ತಿರಿಸಿಕೊಳ್ಳುವ ದೃಶ್ಯವು ಆ ಸಂದರ್ಭದಲ್ಲಿ ನೋಡುಗರ ಗಮನ ಸೆಳೆದಿವೆ. ಪಾರಿವಾಳಗಳು ನೀರು ಅಮೂಲ್ಯ ಎನ್ನುವ ಸಂದೇಶವನ್ನು ಸಾರುತ್ತಿದೆ ಎಂದು ಸೇರಿದ ಜನರಿಂದ ಮಾತುಗಳು ಕೇಳಿಬಂದಿವೆ.
ನಗರದ ಅಲ್ಲಲ್ಲಿ ನುಡು ರಾತ್ರಿ, ತಡ ರಾತ್ರಿ ಸಮಯದಲ್ಲಿ ಕೇಬಲ ಅಳವಡಿಸಲು ಹೊಂಡ ತೊಡುವ ಕಾಮಗಾರಿಗಳು ಅನಧಿಕೃತವಾಗಿ ಪ್ರಾರಂಭಗೊಂಡಿವೆ. ಕಾರ್ಮಿಕರು ಕೆಲಸ ನಿರ್ವಹಿಸುವಾಗ ಭೂಗರ್ಭದೊಳಗಿನ ನೀರಿನ ಕೊಳವೆಗಳು ಹೊಡೆದು ಹೋಗುವ ಪ್ರಕರಣಗಳು ತುಂಬ ನಡೆಯುತ್ತಿವೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊಂಡ ಅಗೆಯುವ ಕಾಮಗಾರಿ ನಡೆಸುವಾಗ ನಗಸಭೆಯಿಂದ ಭೂಗರ್ಭದೊಳಗೆ ನೀರಿನ ಕೊಳವೆಗಳು ಇರುವಿಕೆ ಸ್ಥಳಗಳ ಮಾಹಿತಿಯನ್ನು ನಗರಸಭೆಯ ಅಭಿಯಂತರರಿಂದ ಗುತ್ತಿಗೆದಾರರು ಕಾನೂನಿನ ಪ್ರಕಾರ ಪಡೆಯಬೇಕಾಗಿರುತ್ತದೆ. ಮುಂದಾದರೂ ಹೊಂಡ ಅಗೆಯುವ ಕಾಮಗಾರಿಗಳು ನಡೆಸುವ ಗುತ್ತಿಗೆದಾರರು, ನಗರಸಭೆಯಿಂದ ಕಾಮಾಗಾರಿ ನಡೆಸಲು ಪರವಾನಿಗೆ ಮತ್ತು ಅಗೆಯುವ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದಾರೆಯೇ ಎಂದು ಗಮನಿಸ ಬೇಕು. ಇಲ್ಲದಿದ್ದರೆ ಕೊಳವೆ ಹೊಡೆದು ನೀರು ಪೋಲಾಗುವ ಘಟನೆಗಳು ನಡೆಯುತ್ತವೆ ಎಂದು, ನಾಗರಿಕ ಸಮಿತಿಯ ಕಾರ್ಯಕರ್ತರು ಹೇಳಿದ್ದಾರೆ.
