ಪೊಳಲಿ : ಪಂಡಿತ್ ಜವಾಹರಲಾಲ್ ನೆಹರು ಈ ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟವರು. ಅವರ ಒಡನಾಡಿಯಾಗಿದ್ದ ಮಂಗಳೂರಿನ ಶ್ರೀನಿವಾಸ ಮಲ್ಯ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಚೇತನ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ಶ್ರೀನಿವಾಸ ಮಲ್ಯರ ಮೂಲಕ ಚಾಚಾ ನೆಹ್ರೂರವರು ಜಿಲ್ಲೆಯಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯ ನೆನಪಿಸಿಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.
ಬಡಕಬೈಲಿನ ಗಾಣೆಮಾರಿನ ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಗ್ರಾಮೀಣ ಮಟ್ಟದ ಚಿಣ್ಣರ ಪ್ರತಿಭೋತ್ಸವ-2018 ಸಮಾರೋಪ ಸಮಾರಂಭದಲ್ಲಿ `ನಮ್ಮೂರು ಅಂಗನವಾಡಿ’ ವೆಬ್ಸೈಟ್ ಅನಾವರಣಗೊಳಿಸಿದ ರೈ, ಮಕ್ಕಳ ಮನಸ್ಸು ನಿಷ್ಕಳಂಕ. ಎಲ್ಲರ ಮನಸ್ಸು ಮಕ್ಕಳ ಮನಸ್ಸಿನಂತಾಗಬೇಕು. ಮನುಷ್ಯರು ದ್ವೇಷ ಮರೆತು ಬದುಕಬೇಕು. ದೇಶಪ್ರೇಮ ಎಲ್ಲರಲ್ಲೂ ಇರಬೇಕು. ಆದರೆ ಅದು ದ್ವೇಷಪ್ರೇಮವಾಗಬಾರದು. ಈಗ ದ್ವೇಷಪ್ರೇಮ ಸಮಾಜದಲ್ಲಿ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ಪಿನಲ್ಲಿ ಭಾಗವಹಿಸಿರುವ ತ್ರಿಶಾನ್ನನ್ನು ಸನ್ಮಾನಿಸಿದರು.
ಬಾಲವಿಕಾಸ ಸಮಿತಿ ಅಂಗನವಾಡಿಯ ಅಧ್ಯಕ್ಷ ಕರಿಯಂಗಳ ಗ್ರಾಪಂ ಸದಸ್ಯ ಇಬ್ರಾಹಿಂ ನವಾಜ್ಪ್ರಾಸ್ತಾವಿಕ ಮಾತನಾಡಿದರು. ಸುಮಾರು 22 ಅಂಗನವಾಡಿಯ ಪುಟಾಣಿ ಮಕ್ಕಳು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. ಅತೀ ಹೆಚ್ಚು ಮಕ್ಕಳು ಭಾಗವಹಿಸಿದ ಅಂಗನವಾಡಿಗೆ ಚ್ಯಾಂಪಿಯನ್ ಟ್ರೋಫಿ ಘೋಷಿಸಲಾಗಿತ್ತು.
ಬೆಂಜನಪದವು ಅಂಗನವಾಡಿ ಪ್ರಥಮ ಹಾಗೂ ಗಾಣೆಮಾರು ದ್ವಿತೀಯ ಚ್ಯಾಂಪಿಯನ್ ಟ್ರೋಫಿ ಪಡೆದುಕೊಂಡಿತು.ಭಾಗವಹಿಸಿದ ಪುಟಾಣಿಗಳಿಗೆ ಪ್ರಥಮ ,ದ್ವೀತಿಯ ಹಾಗೂ ಎಲ್ಲಾ ಪುಟಾಣಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಮ್ಮುಂಜೆ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಕರಿಯಂಗಳ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ರಾವ್, ಅಮ್ಮುಂಜೆ ಗ್ರಾಪಂ ಸದಸ್ಯ ಚಂದ್ರಶೇಖರ ಭಂಡಾರಿ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಡಗಬೆಳ್ಳೂರು ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಬಶೀರ್ ಅಹ್ಮದ್ ಗಾಣೆಮಾರ್, ಶೇಖರ ಬಂಗೇರ ಗಾಣೆಮಾರ್, ಮೊಹಮ್ಮದ್ ಬಡಕಬೈಲು, ಮೊಹಮ್ಮದ್ ಗಾಣೆಮಾರ್, ಇಂದಿರಾ ಉಪಸ್ಥಿತರಿದ್ದರು. ರೇಣುಕಾ ಎಸ್ ಬಂಗೇರ ವಂದಿಸಿ. ಜನಾರ್ದನ ಅಮ್ಮುಂಜೆ ನಿರೂಪಿಸಿದರು.


