ಕೈಕಂಬ: ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಗುರುಪುರ ಕೈಕಂಬ ಸಮೀಪದ ಮಳಲಿಯ ಪೆರ್ನಗುರಿ-ಚೆನ್ನೆರೆಪಾದೆ ಎಂಬಲ್ಲಿ ಶನಿವಾರ ನಡೆದಿದೆ. ಆತ್ಮಹತ್ಯೆಗೈದಾತನನ್ನು ಇಲ್ಲಿನ ನಿವಾಸಿ ಯೋಗೀಶ್ ಪೂಜಾರಿ(35) ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಯೋಗೀಶ್ ತನ್ನ ಪರಿಚಯದ ಮನೆಗೆ ತೆರಳಿದ್ದ ವೇಳೆ ಮನೆಯಲ್ಲಿ ಒಬ್ಬಂಟಿ ಯುವತಿಯಿರುವುದನ್ನು ಗಮನಿಸಿ ಆಕೆಯ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ವೇಳೆ ಯುವತಿ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಆಗಮಿಸಿ ಯುವತಿಯನ್ನು ಬಿಡಿಸಿ ಯುವಕನಿಗೆ ಬುದ್ಧಿ ಮಾತು ಹೇಳಿ ಯುವತಿಯನ್ನು ಸಮಾಧಾನ ಪಡಿಸಿದ್ದರು. ಆದರೆ ಸಂಜೆಯ ವೇಳೆಗೆ ಯುವತಿಯ ಮನೆಯವರು ಯೋಗೀಶ್ ವಿರುದ್ಧ ಬಜಪೆ ಠಾಣೆಗೆ ದೂರು ನೀಡಿದ್ದರು.
ಇದರ ಬಗ್ಗೆ ತಿಳಿದ ಯೋಗೀಶ್ ನಿನ್ನೆ ರಾತ್ರಿ ಮನೆಗೆ ಬಾರದೆ ನಾಪತ್ತೆಯಾಗಿದ್ದ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿಯಿಂದ ಈತನಾಗಿ ಸ್ಥಳೀಯರು ಸಾಕಷ್ಟು ಕಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಈತನ ಪತ್ತೆಯಾಗಿರಲಿಲ್ಲ. ಆದರೆ ಈತನ ನೆರೆಮನೆಯವರ ತೋಟದ ಕೆರೆಯ ಸಮೀಪ ಆತ ಧರಿಸಿದ್ದ ಬಟ್ಟೆ ಪತ್ತೆಯಾಗಿರುವುದರಿಂದ ಬಾವಿಯಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಮಾಹಿತಿ ಪಡೆದ ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸುಮಾರು ಬೆಳಿಗ್ಗೆ 10ರ ಸುಮಾರಿಗೆ ಬಾವಿಯ ಆಳದಲ್ಲಿ ಯೋಗೀಶ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.
ಆತ್ಮಹತ್ಯೆಗೈದಾತನಿಗೆ ಮದುವೆಯಾಗಿದ್ದು ಎರಡು ಪುಟ್ಟ ಮಕ್ಕಳಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
