ಬಂಟ್ವಾಳ: ದೇಶದಲ್ಲಿ ಸಿಪಾಯಿ ದಂಗೆಯಂತಹ ಕ್ರಾಂತಿಕಾರಿ ಹೋರಾಟದಿಂದ ಕಂಗೆಟ್ಟ ಬ್ರಿಟೀಷರು ಸ್ವಾತಂತ್ರ್ಯ ಬಿಟ್ಟು ಕೊಟ್ಟರೂ ಇಲ್ಲಿನ ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತರನ್ನು ಪ್ರತ್ಯೇಕಿಸಿ ಒಡೆದು ಆಳುವ ನೀತಿ ಹುಟ್ಟು ಹಾಕಿದ್ದಾರೆ. ಸ್ವಾತಂತ್ರ್ಯಾ ನಂತರದಲ್ಲಿ ಅಂದಿನ ಪ್ರಥಮ ಪ್ರಧಾನಿ ಕೂಡಾ ಇದನ್ನೇ ಮುಂದುವರಿಸಿ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿದ ವಂಶ ಪಾರಂಪರ್ಯ ಪದ್ಧತಿ ಇಂದಿಗೂ ಮುಂದುವರಿದಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸರಸ್ವತಿ ಸನ್ಮಾನ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ವೀಕ್ಷಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶಾಲೆಗೆ ದೇವಸ್ಥಾನದಿಂದ ಬರುತ್ತಿದ್ದ ಅನ್ನದಾಸೋಹವನ್ನು ಈ ಹಿಂದಿನ ಮುಖ್ಯಮಂತ್ರಿ ತಡೆದಿರುವ ಬಗ್ಗೆ ಪತ್ರಿಕೆ ಮತ್ತಿತರ ಮಾಧ್ಯಮಗಳಿಂದ ತಿಳಿದುಕೊಂಡಿದ್ದೆ. ಇದರ ನೈಜ ಮರ್ಮ ಏನು ಎಂಬುದು ಇಲ್ಲಿನ ಗುರುಕುಲ ಮಾದರಿ ಮತ್ತು ದೇಶೀಯ ಸಂಸ್ಕøತಿ ಶಿಕ್ಷಣ ಪದ್ಧತಿ ನೋಡಿದ ಬಳಿಕ ಅರಿವಾಯಿತು. ಇಂತಹ ಧಾರ್ಮಿಕ ಪರಂಪರೆ ಹೊಂದಿರುವ ಸುಸಂಸ್ಕøತ ಶಿಕ್ಷಣ ಪದ್ಧತಿ ಜಾತ್ಯಾತೀತ ಎನ್ನುವ ಮುಖ್ಯಮಂತ್ರಿ ಮತ್ತು ಬುದ್ಧಿಜೀವಿಗಳಿಗೆ ಆಗುವುದಿಲ್ಲ. ದೇಶಕ್ಕೆ ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿತು ಎಂಬ ತಪ್ಪು ಇತಿಹಾಸ ಕಲಿಸುವ ಜಾತ್ಯಾತೀತರಿಗೆ ಇವೆಲ್ಲವೂ ಹಿಡಿಸುವುದಿಲ್ಲ ಎಂದು ಅವರು ಟೀಕಿಸಿದರು.
ಮಹಿಳೆಯರಿಗೆ ದೇವತೆ ಸ್ಥಾನಮಾನ ನೀಡಿದ ಹಿಂದೂ ಸಮಾಜದ ಬಗ್ಗೆ ತಪ್ಪು ಹುಡುಕುವ ಜಾತ್ಯಾತೀತರು ಮುಸ್ಲಿಮರು ಮತ್ತು ಕ್ರೈಸ್ತರಲ್ಲಿ ಮಹಿಳೆಯರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಇಲ್ಲಿನ ಕುಟೀರಗಳಲ್ಲಿ ಗುರುರುಲ ಶಿಕ್ಷಣ, ಅಗ್ನಿ ಯಜ್ಞ ಪ್ರಾರ್ಥನೆ, ಸರಸ್ವತಿ ಪ್ರಾರ್ಥನೆ, ಮಂಕು ತಿಮ್ಮನ ಕಗ್ಗ, ಸಂಸ್ಕøತ ಶ್ಲೋಕ ಪಠಣ ಮತ್ತಿತರ ವಿದ್ಯಾರ್ಥಿಗಳ ಚಟುವಟಿಕೆ ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ ಎನ್., ಡಾ.ಕಮಲಾ ಪಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆ ಮುಖ್ಯಸ್ಥ ಡಾ.ಕೆ.ಪ್ರಭಾಕರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ವಂದಿಸಿದರು.

