ನವದೆಹಲಿ: ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ಶೇ.22.5ರಷ್ಟು ಬಡ್ತಿ ಮೀಸಲಾತಿ ನೀಡುವುದಕ್ಕೆ ನಿರ್ಧರಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್ಗೆ ಪ್ರಸ್ತಾವನೆ ಸಲ್ಲಿಸಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಶತಮಾನಗಳಿಂದಲೂ ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿದೆ ಹಾಗೂ ಇಂದಿಗೂ ಆಗುತ್ತಿದೆ. ಹಾಗಾಗಿ ಈ ವರ್ಗಕ್ಕೆ ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ಮೀಸಲು ಹೆಚ್ಚಿಸುವ ಮೂಲಕ ಅನ್ಯಾಯ ಸರಿಪಡಿಸಬೇಕಾಗಿದೆ ಎಂದು ಕೇಂದ್ರ ನ್ಯಾಯಪೀಠದ ಮುಂದೆ ಹೇಳಿಕೊಂಡಿದೆ.

ಸರ್ಕಾರಿ ಉದ್ಯೋಗದಲ್ಲಿ ಮೀಸಲು ಹೆಚ್ಚಳದ ವಿಚಾರವಾಗಿ ಹಿಂದಿನಿಂದಲೂ ಅಡೆತಡೆಗಳಿವೆ. ಈ ನಡುವೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮಹತ್ವದ ಪ್ರಸ್ತಾವನೆಯಲ್ಲಿ ಸರ್ಕಾರಿ ಉದ್ಯೋಗ ಬಡ್ತಿ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.22.5ರಷ್ಟು ಮೀಸಲು ನೀಡುವ ಅಗತ್ಯವಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ 2006ರಲ್ಲಿ 5 ಮಂದಿ ನ್ಯಾಯಾಧೀಶರು ಸಂವಿಧಾನ ಪೀಠ ನೀಡಿದ್ದ ಷರತ್ತಿನ ಬಡ್ತಿ ಮೀಸಲು ಅನುಷ್ಟಾನ ಅಸಾಧ್ಯ ಎಂದು ಕೇಂದ್ರ ಸುಪ್ರೀ ಕೋರ್ಟ್ಗೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ 12 ವರ್ಷಗಳ ಹಿಂದಿನ ತೀರ್ಪನ್ನು ಮರುಪರಿಶೀಲಿಸಬೇಕೋ ಅಥವಾ ವಿಸ್ತøತ ಪೀಠಕ್ಕೆ ನೀಡಬೇಕೋ ಎಂಬುದನ್ನು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ. ಕೇಂದ್ರ ಪ್ರಸ್ತಾಪಿತ ಶೇ.22.5ರ ಬಡ್ತಿ ಮೀಸಲು ಬಗ್ಗೆ ತೀರ್ಮಾನಿಸಲು ಏಳು ನ್ಯಾಯಾಧೀಶರ ಪೀಠಕ್ಕೆ ಅರ್ಜಿ ಒಪ್ಪಿಸುವಂತೆ ಮನವಿ ಮಾಡಿದೆ.
ಪ್ರತಿವಾದಿ ಹಿರಿಯ ವಕೀಲ ರಾಜೀವ್ ಧವನ್ ಈ ಬಡ್ತಿ ಮೀಸಲು ಮೂಲಭೂತ ಹಕ್ಕು ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಆ.16ಕ್ಕೆ ಕೋರ್ಟ್ ಕಾಯ್ದಿರಿಸಿದೆ. ಎಸ್ಸಿ ಎಸ್ಟಿ ದೌರ್ಜನ್ಯ ಕಾಯಿದೆ ವಿವಾದ ತಣ್ಣಗಾದ ಬೆನ್ನಲ್ಲೇ ಕೇಂದ್ರ ಕೈಗೊಂಡಿರುವ ಈ ನಿರ್ಧಾರದ ಹಿಂದೆ ಮಹಾಚುನಾವಣೆಯಲ್ಲಿ ಆಡಳಿತ ಪಕ್ಷ ಲಾಭದ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ.
