ಕೈಕಂಬ : ಮಂಗಳೂರು-ಸೊಲ್ಲಾಪುರ – ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ(169) ಮಧ್ಯೆ ಫಲ್ಗುಣಿ ನದಿಗೆ ಅಡ್ಡಲಾಗಿರುವ 98 ವರ್ಷಗಳಷ್ಟು ಹಳೆಯದಾದ ಹಾಗೂ ಶಿಥಿಲಗೊಂಡ ಗುರುಪುರ ಸೇತುವೆಯಲ್ಲಿ ಗುರುವಾರ ಪಿಡಬ್ಲ್ಯೂಡಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರುಗಳು ಹಾಗೂ ಸೇತುವೆ ತಜ್ಞರು ವಿಶೇಷ ಉಪಕರಣ ಅಳವಡಿಸಿ ಸಮಗ್ರ ಪರಿಶೀಲನೆ ನಡೆಸಿದರು.
ಬೆಳಿಗ್ಗೆ 6 ಗಂಟೆಗೆ ತಂಡ ಪಿಡಬ್ಲ್ಯೂಡಿ, ಬಂದರು, ಒಳನಾಡು ಮತ್ತು ಜಲಸಾರಿಗೆಗೆ ಸೇರಿದ ಬೃಹತ್ ಕ್ರೇನ್ ಹಾಗೂ ಇತರ ಯಂತ್ರೋಪಕರಣಗಳೊಂದಿಗೆ ಗುರುಪುರ ಸೇತುವೆಗೆ ಆಗಮಿಸಿ ಪರೀಕ್ಷೆ ಆರಂಭಿಸಿತು. ಈ ಸಂದರ್ಭದಲ್ಲಿ ಮಂಗಳೂರು ಲೋಕೋಪಯೋಗಿ ಇಲಾಖೆಯ(ಪಿಡಬ್ಲ್ಯೂಡಿ) `ಗುಣ ಭರವಸೆ’ ಉಪ-ವಿಭಾಗದ ತಂತ್ರಜ್ಞರ ತಂಡ ಸೇತುವೆಯ ಮೇಲ್ಭಾಗದಲ್ಲಿ ನಾಲ್ಕು ಕಂಬಗಳ ಸಮಾನಂತರದಲ್ಲಿ ರಂಧ್ರ ಕೊರೆದು ಸ್ಯಾಂಪಲ್ ಸಂಗ್ರಹಿಸಿತು.
ಇದೇ ಹೊತ್ತಿಗೆ ಬೆಂಗಳೂರಿನ ಸೇತುವೆ ಪರಿಶೀಲನೆ ಏಜೆನ್ಸಿಯ ಸೇತುವೆ ತಜ್ಞ ಜೈಪ್ರಸಾದ್ ಅವರನ್ನೊಳಗೊಂಡ ತಂಡ ಕ್ರೇನ್ ಬಳಸಿಕೊಂಡು ಸೇತುವೆಯ ಅಡಿಭಾಗದಲ್ಲಿ ಪರಿಶೀಲನೆ ನಡೆಸಿದ್ದು, ಕಬ್ಬಿಣದ ಸ್ಲ್ಯಾಬುಗಳಿಗೆ ತುಕ್ಕು ಹಿಡಿದ ಭಾಗಗಳ ಹಲವು ಫೋಟೊ ಸೆರೆ ಹಿಡಿಯಿತು. ತಂಡವು ಕ್ರೇನ್ ಮೂಲಕ ಒಟ್ಟು ಮೂರು ಕಂಬಗಳ ಸಮಾನಂತರದಲ್ಲಿ ನದಿ ಭಾಗಕ್ಕಿಳಿದು ಪರೀಕ್ಷೆ ನಡೆಸಿತು.
ಸುಮಾರು 10 ಗಂಟೆಯವರೆಗೆ ಈ ತಂಡ ಸೇತುವೆ ಮೇಲೆ ಹಾಗೂ ಕೆಳ ಭಾಗದಲ್ಲಿ ಪರಿಶೀಲನೆ ನಡೆಸಿ, ಕೆಲವು ಮಾಹಿತಿ ಸಂಗ್ರಹಿಸಿತು.
ಸೇತುವೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆದ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಸೇತುವೆ ಎರಡೂ ಕಡೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಈ ಅವಧಿಯಲ್ಲಿ ಮಂಗಳೂರು-ಮೂಡಬಿದ್ರೆ-ಕಾರ್ಕಳ ರೂಟ್ನಿಂದ ಆಗಮಿಸುವ ವಾಹನಗಳನ್ನು ಕೈಕಂಬದಿಂದ ಬಜಪೆ ಮಾರ್ಗವಾಗಿ ಮಂಗಳೂರಿಗೆ ಮಂಗಳೂರಿನಿಂದ ಆಗಮಿಸುವ ವಾಹನಗಳನ್ನು ಮಂಗಳಜ್ಯೋತಿ , ಪಚ್ಚನಾಡಿ ಬೋಂದೇಲ್ ನಿಂದ ಬಜಪೆ ಕೈಕಂಬ ಕಡೆಗೆ ಚಲಿಸುವಂತೆ ವಾಹನ ಸಂಚಾರ ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿತ್ತು.
ಸೇತುವೆ ಅಡಿಭಾಗದಲ್ಲಿ ಮುಖ್ಯವಾಗಿ ಬೇರಿಂಗ್, ಡೆಸ್ಕ್ ಲ್ಯಾಬ್ ಪರಿಶೀಲಿಸಿದ ತಂಡ ಸೇತುವೆ ಮೇಲ್ಭಾಗದ ಟ್ರಸ್ ಉತ್ತಮವಾಗಿದೆ ಎಂದಿತು. ಉಳಿದಂತೆ ಪರೀಕ್ಷೆ ಮಾಹಿತಿ ಬಿಟ್ಟುಕೊಡಲು ತಂಡ ನಿರಾಕರಿಸಿತು.
ಸೇತುವೆ ಪರಿಶೀಲನೆ ವೇಳೆ ನೂರಾರು ಕೂತೂಹಲಿಗರು ಸ್ಥಳದಲ್ಲಿ ಜಮಾಯಿಸಿದ್ದರು. ಸಂಚಾರ ಬಂದ್ ಆಗಿರುವುದರಿಂದ ಗುರುಪುರ ಹಾಗೂ ಆಸುಪಾಸಿನ ಶಾಲಾ ಮಕ್ಕಳು, ನಾಗರಿಕರು ನಡೆದುಕೊಂಡು ಸಾಗಿದರು. ಸ್ಥಳೀಯ ಶಾಲಾ ಮಕ್ಕಳು ಅಘೋಷಿತ ರಜೆ ಹಾಕಿದರು. ಕೆಲವರು ಸೇತುವೆ ಕುಸಿದಿದೆ ಎಂಬ ವದಂತಿ ಆಲಿಸಿ ಫಲ್ಗುಣಿ ಸೇತುವೆಯತ್ತ ಧಾವಿಸಿ ಬಂದಿದ್ದರು.
ಸೇತುವೆ ಪರಿಶೀಲನಾ ತಂಡದಲ್ಲಿ ದಿಲ್ಲಿಯ ಬಿಎಸ್ಎಸ್ಐಆರ್ಸಿ ತಜ್ಞ ಆರ್ ಕೆ ಜೈಗೋಪಾಲ್ ಹಾಗೂ ಪಿಡಬ್ಲ್ಯೂಡಿ-ಎನ್ಎಚ್ನ ಎಸ್ಇ ಕಾಂತರಾಜ್, ಸುಬ್ಬರಾವ್ ಹೊಳ್ಳ, ಎಇಇ ಯಶವಂತ್, ಎಇ ಮುರುಗೇಶ್ ಹಾಗೂ ಇತರ ಸಿಬ್ಬಂದಿ ಇದ್ದರು. ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
