ಬಂಟ್ವಾಳ: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದ.ಕ.ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ನೇರ ಪೈಪೋಟಿ ತಾರಕಕ್ಕೆ ಏರಿದೆ. ಇನ್ನೂ ಬಂಟ್ವಾಳ ವಿಧಾನ ಸಭೆ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ಕೂತೂಹಲ ಮೂಡಿಸಿರುವ ಕ್ಷೇತ್ರ. ಈ ಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದರೆ ಈ ಬಾರಿ ಎಸ್ ಡಿಪಿಐ ಕೂಡ ಕಣಕ್ಕಿಳಿದಿದೆ.
ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧೆ: ಕಾಂಗ್ರೆಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಬಂಟ್ವಾಳ ಕ್ಷೇತ್ರ, ಈ ಹಿಂದೆ 1972-2013ರವರೆಗೆ 7 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ, 1 ಬಾರಿ ಸಿಪಿಐ ಶಾಸಕರು ಆಯ್ಕೆಯಾಗಿದ್ದಾರೆ.
ಇನ್ನೂ ಬಂಟ್ವಾಳದಲ್ಲಿ ಪ್ರತಿ ಸ್ಪರ್ಧಿಯನ್ನು ಎದುರಿಸಲು ಬಿಜೆಪಿಯೂ ತಂತ್ರರೂಪಿಸಿದ್ದು, ಇದಕ್ಕಾಗಿ ತನ್ನ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಆರಂಭಿಸಿದೆ. ಈಗಾಗಲೇ ಬಿಜೆಪಿ ಇಲ್ಲಿನ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರನ್ನು ಈ ಕ್ಷೇತ್ರದ ತನ್ನ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸದಿದ್ದರೂ, ರಾಜೇಶ್ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದನದ ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ರಾಜೇಶ್ ನಾಯಕ್ ಅವರು ಕಳೆದ ಜನವರಿಯಲ್ಲಿ 13 ದಿನಗಳ ಕಠಿಣ ಶ್ರಮದ ಪಾದಯಾತ್ರೆ ಕೈಗೊಂಡು ಯಶಸ್ವಿ ನಾಯಕರೆನಿಸಿ ಸ್ಥಳೀಯ ಮತದಾರರ ಮನಗೆದಿದ್ದಾರೆ. ಅಲ್ಲದೆ, ಪಕ್ಷದ ಮುಖಂಡರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಸಚಿವ ರಮಾನಾಥ ರೈ ಎಂಟನೆ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಎರಡು ವರ್ಷದಲ್ಲಿ ನಾಲ್ಕು ಕೊಲೆಪ್ರಕರಣ, ಕಲ್ಲಡ್ಕ, ಪುಣಚ ಶಾಲೆಗೆ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ಬಿಸಿಯೂಟದ ಅನುದಾನ ರದ್ದು, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಗೆ ನಿಂದನೆ ಆರೋಪ, ಅಲ್ಲಾಹುನ ಕೃಪೆಯಿಂದ ಗೆಲುವು, ಹಿಂದೂ ವಿರೋಧಿ ಎಂಬ ಹಣೆಪಟ್ಟಿ, ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರ ಬಂಧನಕ್ಕೆ ಸೂಚನೆ ಹೀಗೆ ಹಲವು ವಿವಾದಗಳಲ್ಲಿ ಸಿಲುಕಿರುವುದರಿಂದ ಸಚಿವರು ಗೆಲುವಿಗೆ ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ. ಆದರೆ ಸಚಿವ ರಮಾನಾಥ್ ರೈ ಇದ್ಯಾವುದಕ್ಕೆ ತಲೆ ಕೆಡಿಸದೆ. ತನ್ನ ನೇರ ನುಡಿಯಿಂದ ವಿರೋಧಿಗಳ ಆರೋಪಕ್ಕೆ ತೆರೆಎಳೆದು ಪ್ರತ್ಯುತ್ತರ ನೀಡುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಕೋಮುವಾದದ ವಿರುದ್ಧ ಧ್ವನಿ, ಶಾಂತಿಗಾಗಿ ಸಾಮರಸ್ಯದ ನಡಿಗೆ ನಡೆಸಿ ರೈ ಈ ಕ್ಷೇತ್ರದಲ್ಲಿ ವಿಭಿನ್ನವಾಗಿ ಗಮನಸೆಳೆದಿದ್ದಾರೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ: 2,16,027 ಇದರಲ್ಲಿ ಪುರುಷರು: 1,07,233, ಮಹಿಳೆಯರು: 1,08,794 ಸಂಖ್ಯೆ ಇದೆ.
ಮಹಿಳಾ ಮತದಾರರೇ ಪ್ರಾಬಲ್ಯ: ಸುಮಾರು 2,16, 027 ಮತದಾರರಿರುವ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಪ್ರಾಬಲ್ಯ ಹೊಂದಿದ್ದಾರೆ. ಈ ಬಾರಿ ಹನ್ನರೆಡು ಸಾವಿರಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಇನ್ನು ಸೇರ್ಪಡೆಗೆ ಅವಕಾಶ ಇರುವುದುರಿಂದ ಮತದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬಂಟ್ವಾಳದಲ್ಲಿ ಅಲ್ಪಸಂಖ್ಯಾತ ಮತಗಳು ನಿಣರ್ಣಾಯಕವೆನಿಸಿದೆ. ಬಿಲ್ಲವ, ಬಂಟ್ ಸಮುದಾಯ ಮತಗಳು ಸಾಕಷ್ಟು ಸಂಖ್ಯೆಯಲ್ಲಿದೆ.
ಎಸ್ ಡಿಪಿಯದ್ದೇ ಸವಾಲು!: ಇನ್ನೂ ಈ ಕ್ಷೇತ್ರ ಮುಸ್ಲಿಂ ಮತಗಳ ಪ್ರಬಲ್ಯ ಇರುವ ಕ್ಷೇತ್ರ ಕೂಡ ಹೌದು. ಈ ಬಾರಿ ಮುಸ್ಲಿಂ ಮತಗಳ ಮೇಲೆ ಎಸ್ ಡಿಪಿಐ ಕೆಂಗಣ್ಣು ಇಟ್ಟಿದ್ದು, ಇದಕ್ಕಾಗಿ ತಮ್ಮದೇ ಅಭ್ಯರ್ಥಿಯಾಗಿರುವ ರಿಯಾಝ್ ಫರಂಗಿಪೇಟೆ ಅವರನ್ನು ಕಣಕ್ಕಿಳಿಸಿದೆ. ಮುಸ್ಲಿಮರನ್ನು ವಿಭಿನ್ನ ರೀತಿಯಲ್ಲಿ ಗಮನ ಸೆಲೆಯಲು ಹರಸಾಹ ಪಡುತ್ತಿದ್ದೆ. ಅಲ್ಲದೆ, ಭರದ ಪ್ರಚಾರಕ್ಕೆ ಕೈ ಹಾಕಿದೆ. ಮುಸ್ಲಿಂ ಮತಗಳ ಓಲೈಕೆಗೆ ಮುಂದಾಗಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಇದರಿಂದ ತಲೆ ನೋವಾಗಿ ಪರಿಣಮಿಸಿದೆ.
ಜೆಡಿಎಸ್ ಅಭ್ಯರ್ಥಿ?: ಇನ್ನು ಜೆಡಿಎಸ್ ಕೂಡ ಸ್ಪಧರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಅಬೂಬಕ್ಕರ್ ಅಮ್ಮುಂಜೆ ಎಂಬವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬೇಕೆಂಬುದು ಇಲ್ಲಿನ ಜನರ ಆಯ್ಕೆಯ ಮೇಲಿದೆ.


