ದಿಲ್ಲಿ: ಸಿಬಿಎಸ್ಇಗೆ ಒಳಪಟ್ಟ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಮರುಪರೀಕ್ಷೆಯನ್ನು ನಡೆಸದಿರಲು ಸಿಬಿಎಸ್ಇ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯು ಇಂದು (ಏಪ್ರಿಲ್ 03) ಸಂಜೆ ಒಳಗೆ ಹೊರಬೀಳುವ ಸಾಧ್ಯತೆ ಇದೆ.
ಸಿಬಿಎಸ್ಇ 10ನೇ ತರಗತಿ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಕಾರಣ ಮರು ಪರೀಕ್ಷೆ ಮಾಡುವುದಾಗಿ ತಿಳಿಸಿತ್ತು. ಆದರೆ ಪರೀಕ್ಷೆಯ ದಿನಾಂಕ ಪ್ರಕಟ ಮಾಡಿರಲಿಲ್ಲ. ಈಗ ಮರು ಪರೀಕ್ಷೆ ನಿರ್ಧಾರವನ್ನೇ ಮಂಡಳಿ ಕೈಬಿಡುವ ಸೂಚನೆ ಇದೆ. ಇದು ವಿದ್ಯಾರ್ಥಿಗಳ ಆತಂಕ ದೂರ ಮಾಡಿದೆ.
ಸಿಬಿಎಸ್ಇ 10ನೇ ತರಗತಿ ಗಣಿತ ಪತ್ರಿಕೆಯು ದೆಹಲಿ ಮತ್ತು ಹರಿಯಾಣ ಪ್ರದೇಶದಲ್ಲಿ ಸೋರಿಕೆ ಆಗಿತ್ತು ಹಾಗಾಗಿ ಅವರೆಡು ಪ್ರದೇಶದಲ್ಲಿ ಮಾತ್ರವೇ ಪರೀಕ್ಷೆ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹೇಳಿದ್ದರು. ಈಗ ಮರು ಪರೀಕ್ಷೆ ನಿರ್ಧಾರದಿಂದಲೇ ಹಿಂದೆ ಸರಿದಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಸಂಜೆ ಒಳಗೆ ಹೊರ ಬರುವ ನಿರೀಕ್ಷೆ ಇದೆ.
ಸಿಬಿಎಸ್ಇ 12ನೇ ತರಗತಿ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆ ಘೋಷಣೆಯಾದ ದಿನಾಂಕದಂದೇ ಅಂದರೆ ಏಪ್ರಿಲ್ 25ರಂದೇ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈಗಾಗಲೇ ಇಬ್ಬರು ಖಾಸಗಿ ಶಾಲೆ ಶಿಕ್ಷಕರು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

