ಮಂಗಳೂರು: ತರಬೇತಿಯಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ದೊಡ್ಡ ಯಶಸ್ಸು ಕಾಣಲು ಸಾಧ್ಯ ಎಂದು ಕೆನಡಾದ ಗ್ರೇಸಿಯಾ ಬರ್ರಾ ಬ್ಲಾಕ್ ಬೆಲ್ಟ್ ತರಬೇತುದಾರ ಪ್ರೊ. ಮಾರ್ಕ್ ಮುಲ್ಲೆನ್ ಕಿವಿಮಾತು ಹೇಳಿದ್ದಾರೆ.
ನಗರದ ಮಂಕಿ ಮೇಯ್ಹೆಮ್ ಫೈಟ್ ಕ್ಲಬ್ ನಲ್ಲಿ ನಡೆದ ಅಡ್ವಾನ್ಸ್ಡ್ ಬ್ರೆಜಿಲಿಯನ್ ಜಿಜುಟ್ಸು ಆಂಡ್ ಎಂಎಂಎ ವರ್ಕ್ ಶಾಪ್ ಎರಡು ದಿನಗಳ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಮ್ಯೂಥಾಯ್ ಕ್ರೀಡೆಯ ರಾಷ್ಟ್ರೀಯ ತರಬೇತುದಾರ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಏಷ್ಯನ್ಬಗೇಮ್ಸ್ ನಲ್ಲೂ ಜಿಜುತ್ಸು ಸೇರ್ಪಡೆಗೊಂಡಿದ್ದು, ಕಠಿಣ ತರಬೇತಿ ಪಡೆದುಕೊಂಡು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡುವ ಉಜ್ವಲ ಅವಕಾಶವಿದ್ದು, ಇದಕ್ಕಾಗಿ ಸತತ ಪ್ರಯತ್ನ, ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.
ಈ ವೇಳೇ ಕೆನಡಾದ ಗ್ರೇಸಿಯಾ ಬರ್ರಾ ಬ್ಲಾಕ್ ಬೆಲ್ಟ್ ತರಬೇತುದಾರ ಪ್ರೊ. ಮಾರ್ಕ್ ಮುಲ್ಲೆನ್ ಅವರು ಶಿಬಿರವನ್ನು ನಡೆಸಿಕೊಟ್ಟರು.
ಮ್ಯೂಥಾಯ್ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಅಧ್ಯಕ್ಷ ರಾಜಗೋಪಾಲ ರೈ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜುಜಿಟ್ಸು ಅಸೋಸಿಯೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಪ್ರವೀಣ್ ರಾಂಕಾ, ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಯೂನಿಯನ್ ಬ್ಯಾಂಕ್ ಎಜಿಎಂ ಅಶೋಕ್ ದಾಸ್, ಯೂನಿಯನ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಮನೋಜ್, ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ರೆಹಮಾನ್, ನ್ಯಾಯವಾದಿ ರಾಘವೇಂದ್ರ ರಾವ್, ಜಿಎಸ್ ಎಫ್, ಝ್ಯೂಸ್ ಫಿಟ್ನೆಸ್, ಕೋರ್ ಫಿಟ್ನೆಸ್, ಗೋಲ್ಡ್ಸ್ ಜಿಮ್, ಫಾಲ್ಕನ್ ಫಿಟ್ನೆಸ್ ಮತ್ತಿತರರು ಉಪಸ್ಥಿತರಿದ್ದರು.
ಸಚಿನ್ ರಾಜ್ ರೈ ಸ್ವಾಗತಿಸಿ, ಬಿಪಿನ್ ರಾಜ್ ರೈ ವಂದಿಸಿದರು. ಮಂಕಿ ಮೇಯ್ಹೆಮ್ ಫೈಟ್ ಕ್ಲಬ್ ಆಂಡ್ ಫಿಟ್ ನೆಸ್ ಸೆಂಟರ್ ನ ಮುಖ್ಯ ತರಬೇತುದಾರ ನಿತೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.



