ಬಂಟ್ವಾಳ: ಸಂಬಂಧಿಕರ ಮನೆಯಿಂದ ಔತಣಕೂಟ ಮುಗಿಸಿಕೊಂಡು ರಿಕ್ಷಾದಲ್ಲಿ ಬರುತ್ತಿದ್ದ ಬರುತ್ತಿದ್ದ ಕುಟುಂಬದ ಮೇಲೆ ಜವರಾಯನಂತೆ ಎರಗಿದ ಹಾಸನದ ಕೆಎಸ್ಆರ್ಟಿಸಿ ಬಸ್ ಒಂದೇ ಕುಟುಂಬದ 4 ಮಂದಿಯನ್ನು ಬಲಿತೆಗೆದುಕೊಂಡ ಘಟನೆ ಸೋಮವಾರ ತಡರಾತ್ರಿ 11ರ ಸುಮಾರಿಗೆ ನಡೆದಿದೆ.
ಈ ಘಟನೆ ನಡೆದಿದ್ದು ಬಂಟ್ವಾಳದ ರಾ.ಹೆ.75ರ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ. ಆದರೆ ಅಪಘಾತಕ್ಕೆ ಕಾರಣನಾದ ಬಸ್ಚಾಲಕ ಸ್ಥಳದಿಂದ ಕಂಬಿಕಿತ್ತಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುದ್ದೆಯಾಗಿ ಬಿದ್ದಿದೆ.
ಘಟನೆಯಿಂದ ರಿಕ್ಷಾ ಪ್ರಯಾಣಿಕರಾದ ಬರಿಮಾರು ಗ್ರಾಮದ ಮುಳಿಬೈಲು ನಿವಾಸಿ ಲಕ್ಷ್ಮಣ ಪೂಜಾರಿ ಎಂಬವರ ಪುತ್ರ ರಿಕ್ಷಾ ಚಾಲಕ ಭಾಸ್ಕರ ಪೂಜಾರಿ(45), ಅವರ ಸೋದರ ಜಗದೀಶ್(42), ಪತ್ನಿಯಂದಿರೆನ್ನಲಾದ ಸುಪ್ರೀತಾ ಹಾಗೂ ಪ್ರೇಮಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಭಾಸ್ಕರ ಅವರ ಪುತ್ರಿಯರಾದ ಅಭಿಜ್ಞಾ, ರಿತಿಜ್ಞಾ, ಹಾಗೂ ಜಗದೀಶ್ ಅವರ ಪುತ್ರ ನಿಶಾನ್ ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಭಾಸ್ಕರ್ ಹಾಗೂ ಜಗದೀಶ್ ಅನಂತಾಡಿ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷೆ ಹಾಗೂ ಹಾಳಿ ಸದಸ್ಯೆ ಗೀತಾ ಎಂಬವರ ಸಹೋದರರಾಗಿದ್ದರು ಎಂದು ತಿಳಿದುಬಂದಿದೆ. ಘಟನೆಯ ತೀವ್ರತೆಗೆ ಬಸ್ ರಿಕ್ಷಾವನ್ನು ಸುಮಾರು 100 ಮೀ.ಗೂ ಅಧಿಕ ದೂರಕ್ಕೆ ಎಳೆದುಕೊಂಡು ಬಂದಿದ್ದು ಮೃತದೇಹ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಗೆ ಬಸ್ಚಾಳಕನ ಅಜಾಗೂರಕತೆಯೇ ಕಾರಣ ಎಂದು ನಂಬಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಪಾಣೆಮಂಗಳೂರು, ಆಲಡ್ಕ, ಮೆಲ್ಕಾರ್, ಶಾಂತಿ ಅಂಗಡಿ, ಕೈಕಂಬ ಪ್ರದೇಶದಿಂದ ಆಗಮಿಸಿದ ಸ್ಥಳೀಯರು ಮೃತದೇಹ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾದರು. ಈ ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಘಟನೆಗೆ ಕಾರಣನಾದ ಬಸ್ಚಾಲಕನಿಗೆ ಕಠೀಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



