ಸುದ್ದಿ9 :ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ಸಂಶೋಧಕ ಡಾ. ಕೆ.ಜಿ.ವಸಂತ ಮಾಧವ ಪಾವಂಜೆ ಇವರಿಗೆ ನೀಡಲಾಗುವುದು.
ನಾಡಿನ ಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸಕರಾಗಿದ್ದ ಅವರು ಶಿಕ್ಷಣ, ಸಾಹಿತ್ಯ, ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸೃಜನಶೀಲರು. ಇವರ ಸಂಶೋಧನಾತ್ಮಕ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಮೂಲಿಕೆಯ ಇತಿಹಾಸ, ಕರಾವಳಿ ಕನರ್ಾಟಕದ ಇತಿಹಾಸ ಸಂಶೋಧನೆ, ಕರಾವಳಿ ಕನರ್ಾಟಕದ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪಂಚ ಗಂಗಾವಳಿ ನದಿ ತೀರದ ಸಾಂಸ್ಕೃತಿಕ ಇತಿಹಾಸದ ಆಕರಗಳು ಸಹಿತ ಇನ್ನೂ 150ಕ್ಕೂ ಮಿಕ್ಕಿ ಸಂಶೋಧನಾ ಬರಹಗಳು ಭಾರತೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕ ಪ್ರತಿಕೆಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕೊ.ಅ.ಉಡುಪ ಪ್ರಶಸ್ತಿಯನ್ನು ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

