ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಇದರ ಪುನರ್ ನಿರ್ಮಾಣ ಕಾರ್ಯವು ಸದ್ಯದಲ್ಲಿಯೇ ಪ್ರಾರಂಭ ಆಗುವುದರಿಂದ ಮಂದಿರದಲ್ಲಿ ಈ ಹಿಮ್ದೆ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ದೇವರನ್ನು ಡಿ.31ರ ಶನಿವಾರ ಗೋಕುಲದಿಂದ ಸ್ಥಳಾಂತರಿಸಿ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲು ಮಾಡಬೇಕಾದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳನ್ನು ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಸಂಪನ್ನಗೊಳಿಸಲಾಯಿತು.

gokula-1

ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಜಂಟಿಯಾಗಿ ಕಳೆದ ರವಿವಾರ (ಡಿ. 25) ವೇದಮೂರ್ತಿ ಶ್ರೀ ಕೃಷ್ಣರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸರ್ಪಸಂಸ್ಕಾರದೊಂದಿಗೆ ಆದಿ ಗೊಳಿಸಿದ್ದು, ಬುಧವಾರ (ಡಿ.28) ಪ್ರಾತಃಕಾಲ ಶ್ರೀ ಕೃಷ್ಣ ಮಂದಿರದಲ್ಲಿ ನಿತ್ಯಪೂಜೆ ನಂತರ ವೇದಮೂರ್ತಿ ಗುರುರಾಜ ಉಡುಪ ಹಾಗೂ ಕುಮಾರ್ ಭಟ್ ಸಂಗಡಿಗರ ನೇತೃತ್ವದಲ್ಲಿ ಪುಣ್ಯಾಹ, ಸರ್ಪ ಸಂಸ್ಕಾರ ಹೋಮ, ಆಶ್ಲೇಷ ಬಲಿ ನೆರವೇರಿಸಲಾಯಿತು. ಪಿ.ಸಿ.ಎನ್ ರಾವ್ ಮತ್ತು ವಾಣಿ ರಾವ್ ದಂಪತಿ ಯಜಮಾನತ್ವ ವಹಿಸಿದ್ದರು. ಗುರುವಾರ (ಡಿ.29) ರಾತ್ರಿ ವೇದಮೂರ್ತಿಗಳಾದ ಶ್ರೀ ಪ್ರಸನ್ನ ಆಚಾರ್ಯ ನಿಟ್ಟೆ, ನಟೇಶ್ ಅಮ್ಮಣ್ಣಾಯ, ಗುರುರಾಜ್ ಉಡುಪ, ಕೃಷ್ಣರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸುದರ್ಶನ ವಿಧಾನದಲ್ಲಿ ರಕ್ಷಾ ಸುದರ್ಶನ ಹೋಮ ನೆರವೇರಿಸಲಾಯಿತು.

g-3
ಇಂದಿಲ್ಲಿ ಶುಕ್ರವಾರ (ಡಿ.30) ಬೆಳಿಗ್ಗೆ ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಮನ್ಯುಸೂಕ್ತ ಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ವೇದಮೂರ್ತಿಗಳಾದ ಶ್ರೀ ಪ್ರಸನ್ನ ಆಚಾರ್ಯ ನಿಟ್ಟೆ, ಮುರಳೀಧರ ತಂತ್ರಿ ಎಡಪದವು, ಜನಾರ್ದನ್ ಅಡಿಗ, ನಟೇಶ್ ಅಮ್ಮಣ್ಣಾಯ, ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ, ಹಾಗೂ ಸುದರ್ಶನ ತಂತ್ರಿ, ಕೃಷ್ಣರಾಜ ತಂತ್ರಿ, ಕೃಷ್ಣರಾಜ ಉಪಾಧ್ಯಾಯ, ಕುಮಾರ್ ಭಟ್, ಶ್ರೀಧರ ಭಟ್, ರಾಘವೇಂದ್ರ ಉಪಾಧ್ಯಾಯ, ಗುರುಪ್ರಸಾದ ಭಟ್ ರವರ ಸಭಾಗಿತ್ವದಲ್ಲಿ ಸಾಂಗವಾಗಿ ನೆರವೇರಿತು.

ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ಬಿ. ರಮಾನಂದ ರಾವ್ ಮತ್ತು ಲಕ್ಷ್ಮೀ ಆರ್.ರಾವ್, ಕೃಷ್ಣ ಆಚಾರ್ಯ, ಪ್ರೀತಿ ಕೆ.ಆಚಾರ್ಯ ಹಾಗೂ ಡಾ| ಅರುಣ್ ರಾವ್ ಮತ್ತು ಶೈಲಿನಿ ರಾವ್ ದಂಪತಿಗಳು ಹೋಮಗಳ ಯಜಮಾನತ್ವ ವಹಿಸಿದ್ದರು.

goukla-2

ಇಂದು ಶನಿವಾರ (ಡಿ.31) ಬೆಳಿಗ್ಗೆ ನಿತ್ಯ ಪೂಜೆ, ಅನುಜ್ಞಾ ಕಲಶದ ನಂತರ ಶ್ರೀ ದೇವರ ಸಂಕೋಚ ಪ್ರಕ್ರಿಯೆ ಆರಂಭವಾಗುವುದು. ಆ ಪ್ರಯುಕ್ತ ಬೆಳಿಗ್ಗೆ 9. 30 ರಿಂದ ಭಕ್ತಾದಿಗಳಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪುಷ್ಪಾರ್ಚನೆ, ವೇದಘೋಷ, ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನೆ ನೆರವೇರಲಿರುವುದು. ಪ್ರಸಾದ ಭೋಜನದ ಸಂಜೆ 3.00 ಗಂಟೆಯಿಂದ ಪುಣ್ಯ ಕಲಶಗಳು, ಹುಲಿಕುಣಿತ, ಕೋಲಾಟ, ಲೇಜಿಮ್, ಕೀಲು ಕುದುರೆ, ಯಕ್ಷಗಾನ ನೃತ್ಯಗಳ ಭವ್ಯ ಮೆರವಣಿಗೆಯೊಂದಿಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತ ಅಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರ ಮಂಗಳಮೂರ್ತಿಯನ್ನು ಆಶ್ರಯದ ಬಾಲಾಲಯಕ್ಕೆ ಕೊಂಡೊಯ್ಯಲಾಗುವುದು. ರವಿವಾರ (ಜ.01) ಪ್ರಾತಃಕಾಲ 11.29 ಕ್ಕೆ ನವಿಮುಂಬಯಿ ಅಲ್ಲಿನ ಸೀವುಡ್ಸ್‍ನ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ಉಭಯ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ತಿಳಿಸಿದ್ದಾರೆ. ಮಹಾನಗರದಲ್ಲಿನ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಎಸ್‍ಕೆಬಿಎ ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್ ಮತ್ತು ಸರ್ವ ಪದಾಧಿಕಾರಿಗಳು ತಿಳಿಸಿದ್ದಾರೆ.

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *