ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಕೋಟೆ ಶಿಸ್ತಿಗೆ ಹೆಸರು ವಾಸಿಯಾಗಿದ್ದ ಶಿವಪ್ಪ ನಾಯಕನ ಕಾಲದ್ದು. ಐತಿಹಾಸಿಕ ಮಹತ್ವದ ಈ ಕೋಟೆ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕೋಟೆಯ ಅಂದವನ್ನು ಕಣ್ತುಂಬಿಕೊಳ್ಳುತ್ತಾರೆ. ಮಲ್ಲವ ಅರಸರ ಆಳ್ವಿಕೆ ಒಳಪಟ್ಟಿದ್ದ ಇದು 80 ಎಕರೆಗೂ ಹೆಚ್ಚು ವಿಸ್ತಾರದಲ್ಲಿದೆ. ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ‘ಭುವನಗಿರಿ ದುರ್ಗ’ ಎಂಬ ಹೆಸರಿಟ್ಟು ಆಳ್ವಿಕೆ ನಡೆಸಿದರು.

ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರು ಶಿವಪ್ಪ ನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ. ಛತ್ರಪತಿ ಶಿವಾಜಿ ಮಹರಾಜನ ಮಗನಾದ ರಾಜರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. 18 ನೇ ಶತಮಾನದಲ್ಲಿ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ದಾಳಿಯಿಂದ ಕವಲೇದುರ್ಗ ಕೋಟೆಯ ಸ್ವರೂಪ ಹಾಳಾಗಿದೆ. ಕವಲೇದುರ್ಗ ಆಳುತಿದ್ದ ಕೆಳದಿ ನಾಯಕರು ಆರಂಭದಲ್ಲಿ ವಿಜಯನಗರ ಅರಸರ ಸಾಮಂತರಾಗಿದ್ದರು. ನಂತರ ಸ್ವಾತಂತ್ರ್ಯ ಘೋಷಿಸಿದರು.


ವೆಂಕಟಪ್ಪ ನಾಯಕ ಈ ಕೋಟೆಯ ನಿರ್ಮಾತೃ. ಕೋಟೆಯ ಆವರಣದಲ್ಲಿ ಅರಮನೆ ಮಹತ್ತಿನ ಮಠ, ಶೃಂಗೇರಿ ಮಠ ಟಂಕಶಾಲೆ, ಕಣಜಗಳು ಆನೆ ಮತ್ತು ಕುದುರೆ ಲಯಗಳಿದ್ದವು. ಕೊಳ ಮತ್ತು ನೀರಿನ ವ್ಯವಸ್ಥೆ ಮಾಡಿ ಇದನ್ನು ಸುಸಜ್ಜಿತ ಅಗ್ರಹಾರವನ್ನಾಗಿ ರೂಪಿಸಲಾಗಿತ್ತು. ಈಗಲೂ ಇವುಗಳು ಕಾಣಸಿಗುತ್ತವೆ. ಆದರೆ ಅದರ ಹಾಳುಬಿದ್ದ ಸ್ಥಿತಿ ಖೇದ ಉಂಟುಮಾಡುತ್ತದೆ. ಗುಡ್ಡದ ರೂಪುರೇಷೆ ಅನುಸರಿಸಿ ಬೃಹತ್ ಕಲ್ಲುಗಳನ್ನು ಬಳಸಿ ಮೂರು ಸುತ್ತಿನ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಇಕ್ಕೆಲಗಳಲ್ಲಿ ಪ್ರತಿ ಸುತ್ತಿನಲ್ಲಿ ಕಾವಲುಗಾರರ ಕೋಠಿ ಸಹಿತ ಪ್ರವೇಶದ್ವಾರವಿದೆ. ಕೋಟೆಯ ತುದಿಯಲ್ಲಿ ಶ್ರೀ ಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.
ಕೋಟೆಯಲ್ಲಿ ಶಿಥಿಲಗೊಂಡ ಅರಮನೆ ನಿವೇಶನಗಳು ಮತ್ತು ಕಟ್ಟಡಗಳ ಅವಶೇಷಗಳಿವೆ. ಸಾಕಷ್ಟು ಮಹಿತಿಯನ್ನು ಪುರಾತತ್ವ ಸರ್ವೇಕ್ಚಣೆ ಇಲಾಖೇಯ ಕೋಟೆ ಪ್ರವೇಶದ್ವಾರದ ಫಲಕದಲ್ಲಿ ತಿಳಿಸಿದೆ.

ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕೋಟೆ ವೀಕ್ಷಣೆಗೆ ಹೋಗುವರಿಂದ ಶುಲ್ಕ ಸಂಗ್ರಹಿಸಿಕೊಳ್ಳುತ್ತಾರೆ.

ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳು ಕವಲೇದುರ್ಗದಿಂದ ಸುಮರು 60 ಕಿ. ಮೀ. ದೂರದಲ್ಲಿ ಅರುಣಗಿರಿ ಎಂಬ ಸ್ಥಳವಿದೆ. 900 ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟದ ಮೇಲೆ ವೆಂಕಟರಮಣ ಸ್ವಾಮಿ ದೇವಾಲಯವಿದೆ. ಅದು ಬಿಟ್ಟರೆ ಸಿಬ್ಬಲು ಗುಡ್ಡೆ ಇದೆ. ಕುವೆಂಪು ಅವರ ಸಾಹಿತ್ಯದಲ್ಲಿ ಪ್ರಸ್ತಾಪವಾಗುವ ಸಿಬ್ಬಲುಗುಡ್ಡೆ ಸಹ ಕವಲೇದುರ್ಗಕ್ಕೆ ಸಮಿಪವಿದೆ. ಸೂರ್ಯಾಸ್ತ ವೀಕ್ಷಣೆಗೆ ಸುಂದರ ಸ್ಥಳವಿದೆ. ಆಗುಂಬೆಯಲ್ಲಿ ಕಾಣಿಸುವಂತೆ ಸೂರ್ಯ ಕೆಂಬಣ್ಣದಲ್ಲಿ ಮುಳುಗುವುದನ್ನು ನೋಡಿ ಕಣ್ತುಂಬಿ ನೋಡಿ ಆನಂದ ಪಡೆಯಬಹುದು. ಆದರೆ ಶುಭ್ರ ಆಕಾಶ ಇರಬೇಕಷ್ಟೇ.

ಕವಲೇದುರ್ಗ ಬೆಂಗಳೂರಿನಿಂದ 340 ಕಿ. ಮೀ, ತೀರ್ಥಹಳ್ಳಿಯಿಂದ 24 ಕಿ. ಮೀ. ಹಾಗೂ ಶಿವಮೊಗ್ಗದಿಂದ 75 ಕಿ. ಮೀ ದೂರದಲ್ಲಿದೆ. ತೀರ್ಥಹಳ್ಳಿ- ಸಾಲೂರು ಮಾರ್ಗವಾಗಿ ಕವಲೆದುರ್ಗ ತಲುಪಬಹುದು.
ಸಂಗ್ರಹ

