ನವದೆಹಲಿ: ಕಳಂಕರಹಿತ ಸರ್ಕಾರ ನಡೆಸಲು ಪಣತೊಟ್ಟಿರುವ ನರೇಂದ್ರ ಮೋದಿಗೆ ಮುಜುಗರದ ಪ್ರಸಂಗ ಎದುರಾಗಿದೆ. ರಾಸಾಯನಿಕ ಮತ್ತು ಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಮೇಘವಾಲ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ಅಗಸ್ಟ್ 20 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜೈಪುರ ಕೋರ್ಟ್ ನಿಹಾಲ್ ಚಂದ್’ಗೆ ಸೂಚಿಸಿದೆ.
ಏನಿದು ಅತ್ಯಾಚಾರ ಪ್ರಕರಣ?
2011ರಲ್ಲಿ ವಿವಾಹಿತ ಮಹಿಳೆಯೊಬ್ಬಳು ಸಚಿವ ನಿಹಾಲ್ ಚಂದ್ ಹಾಗೂ 16 ಮಂದಿ ವಿರುದ್ಧ ಜೈಪುರದ ವೈಶಾಲಿನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ತಮ್ಮ ಮೇಲೆ ನಿಹಾಲ್ ಚಂದ್ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತಾ ಮಹಿಳೆ ಆರೋಪ ಮಾಡಿದ್ದಳು. ಈ ಸಂಬಂಧ 2011ರಲ್ಲೇ ಎಫ್ಐಆರ್ ಕೂಡ ದಾಖಲಾಗಿತ್ತು. ಆದ್ರೆ 2012ರಲ್ಲಿ ಈ ಪ್ರಕರಣವನ್ನ ಮುಚ್ಚಲಾಗಿತ್ತು.
ಅದರೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನ ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದ ಮಹಿಳೆ ಮತ್ತೆ ಕೋರ್ಟ್’ನಲ್ಲಿ ಪುನರ್’ಪರಿಶೀಲನಾ ಅರ್ಜಿ ಹಾಕಿದ್ದಳು.
2014ರ ಫೆಬ್ರವರಿ 10ರಂದು ಪೊಲೀಸರು ಜೈಪುರ ಮೆಟ್ರೋಪಾಲಿಟನ್ ಕೋರ್ಟ್’ಗೆ ಫೈನಲ್ ರಿಪೋರ್ಟ್ ಕೂಡ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಚಿವ ನಿಹಾಲ್ ಚಂದ್ ಜೊತೆಗೆ ಇನ್ನೂ 16 ಮಂದಿಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ.
ರಾಜೀನಾಮೆಗೆ ಒತ್ತಾಯ..
ಈ ನಡುವೆ ಸಚಿವ ನಿಹಾಲ್ ಚಂದ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ಕಾಂಗ್ರೆಸ್ ಒತ್ತಾಯಿಸಿದೆ.
ರಾಜಸ್ಥಾನದ ಸಂಸದರ ಪೈಕಿ ಮೋದಿ ಸಚಿವಾಲಯದಲ್ಲಿ ಸ್ಥಾನ ದಕ್ಕಿಸಿಕೊಂಡ ಏಕೈಕ ವ್ಯಕ್ತಿ ಅಂದ್ರೆ ನಿಹಾಲ್ ಚಂದ್. ಈಗ ಅವರೇ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರೋದು ಬಿಜೆಪಿಗೆ ಮುಜುಗರ ತಂದಿದೆ.
