ನವದೆಹಲಿ: ಜನರಿಗೆ ಉತ್ತಮ ಆಡಳಿತದ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಪೂರಕವಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ ಜನರ ಜೊತೆ ಸಂಪರ್ಕದಲ್ಲಿರುವಂತೆ ತಮ್ಮ ಸಂಪುಟ ಸಚಿವರಿಗೆ ಸೂಚನೆ ನೀಡಿದ್ಧಾರೆ. ಪಾರದರ್ಶಕತೆ ಮತ್ತು ಆಡಳಿತದಲ್ಲಿ ಸಾರ್ವಜನಿಕರನ್ನ ತೊಡಗಿಸುವ ದೃಷ್ಟಿಯಿಂದ ಮೋದಿ ಸಚಿವರಿಗೆ ಈ ಸೂಚನೆ ನೀಡಿದ್ದಾರಂತೆ.
ಅಷ್ಟೇ ಅಲ್ಲ, ಸರ್ಕಾರದ ಪಾಲಿಸಿಗಳನ್ನ ಪೇಜ್`ನಲ್ಲಿ ಹಾಕುವ ಮೂಲಕ ಚರ್ಚೆಗೆ ವೇದಿಕೆ ಕಲ್ಪಿಸಬೇಕು. ಸಾರ್ವಜನಿಕರ ಮೌಲ್ಯಯುತವಾದ ಪ್ರತಿಕ್ರಿಯೆ ಪಡೆದು ಪಾಲಿಸಿಗಳಲ್ಲಿ ಬದಲಾವಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರಂತೆ. ಬರೀ ಲೋಕಸಭೆಯಲ್ಲೇ ಗಲಾಟೆ ಮಧ್ಯೆ ಸದ್ದಿಲ್ಲದೆ ಅಂಗೀಕಾರವಾಗುತ್ತಿದ್ದ ಮಸೂದೆಗಳು ಸಾರ್ವಜನಿಕರಿಗೆ ಗೊತ್ತಾಗಬೇಕು ಎಂಬುದು ಮೋದಿಯ ಅಭಿಲಾಷೆ.
ಇತ್ತಿಚಿನ ದಿನಗಳಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಾಮಾಜಿಕ ಜಾಲತಾಣಗಳ ಮಹತ್ವವನ್ನ ಅರಿತಿರುವ ಮೋದಿ ಈ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಕೆಲಸ ಕಾರ್ಯಗಳನ್ನ ಜನರ ಗಮನಕ್ಕೆ ತರಲು ಇದೊಂದು ಒಳ್ಳೆಯ ಮಾರ್ಗ ಎಂದು ಆಯ್ಕೆಮಾಡಿಕೊಂಡಿದ್ದಾರೆ.
ಕಳೆದ 2 ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್`ನಲ್ಲಿ ಇದ್ದಾರೆ. ಸಂಪುಟ ಸದಸ್ಯರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಹ ಟ್ವಿಟ್ಟರ್`ನಲ್ಲಿ ಆಕ್ಟಿವ್ ಆಗಿದ್ದಾರೆ.
