ಮೀರ್ಪುರ್: ಟೀ ಇಂಡಿಯಾದ ಸ್ಪಿನ್ನರ್ಸ್ ಕೈಚಳಕದಿಂದ ಭಾರತವು ಇಲ್ಲಿ ನಡೆದ ಟಿ20 ವಿಶ್ವ ಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಧೋನಿ ತಂತ್ರವು ಆರಂಭದಲ್ಲಿ ವಿಫಲವಾದಂತೆ ಕಂಡುಬಂದರೂ ಸ್ಪಿನ್ನರ್ಸ್ ದಾಳಿಗಿಳಿದ ನಂತರ ಸಂಪೂರ್ಣ ಚಿತ್ರಣ ಬದಲಾಯಿತು. ಕಮ್ರಾನ್ ಅಕ್ಮಲ್(8) ರನೌಟ್ ಆದ ನಂತರ ಕ್ರೀಸ್ ಗೆ ಬಂದ ನಾಯಕ ಮೊಹಮ್ಮಮದ್ ಹಫೀಜ್(15) ಆರಂಭಿಕ ಅಹ್ಮದ್ ಶೆಹಜಾದ್(22) ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಅಮಿತ್ ಮಿಶ್ರಾ ಸ್ಪಿನ್ ಮೋಡಿಗೆ ಶೆಹಜಾದ್ ಬಲಿಯಾದರೆ ರವೀದ್ರ ಜಡೇಜಾ ಫಿರ್ಕಿ ನಾಯಕನನ್ನು ಬಲಿ ಪಡೆಯಿತು. ಉಮರ್ ಅಕ್ಮಲ್(33) ಮತ್ತು ಶೋಯಿಬ್ ಮಲಿಕ್(18) ಒಂದಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿ ತಂಡದ ಮೊತ್ತವನ್ನು ಏರಿಸಿದರಾದರೂ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ರನ್ ಮೆಷಿನ್ ಶಾಹಿದ್ ಅಫ್ರೀದಿ 8 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದೇ ವೇಳೆ ಬಾಲಂಗೋಚಿ ಆಟಗಾರ ಅಬ್ಬರದ ಬ್ಯಾಟಿಂಗ್ ನಡೆಸಿ 12 ಎಸೆತಗಳಲ್ಲಿ 21 ರನ್ ಬಾರಿಸುವ ಮೂಲಕ ತಂಡ 130 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಲು ನೆರವಾದರು.

ಗೆಲ್ಲುವ ವಿಶ್ವಾಸದಿಂದಲೇ ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಸತತ ವೈಫಲ್ಯಗಳ ನಂತರ ಮೊದಲ ಬಾರಿ ಟೀ ಇಂಡಿಯಾದ ಓಪನರ್ ಗಳಾದ ರೋಹಿತ್ ಶರ್ಮಾ(24) ಮತ್ತು ಶಿಖರ್ ಧವನ್(30) ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಯುವರಾಜ್ ಸಿಂಗ್(1) ಯಾವುದೇ ಪ್ರತಿರೋಧ ತೋರದೆ ವಿಕೆಟ್ ಒಪ್ಪಿಸಿ ಮರಳಿದರು. ನಂತರ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ(36) ತಮ್ಮ ಎಂದಿನ ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ಮುಂದಿವರಿಸಿದರು. ಕೊಹ್ಲಿ ಮತ್ತು ಸುರೇಶ್ ರೈನಾ(35) ಜೊತೆಯಾಗಿ ಇನ್ನೂ ಒಂಬತ್ತು ಎಸೆತಗಳು ಬಾಕಿಯಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಮಿತ್ ಮಿಶ್ರಾ ಮ್ಯಾನ್ ಆಫ್ ದ ಮ್ಯಾಚ್ ಆಗಿ ಆಯ್ಕೆಯಾದರು.
