ಸುದ್ದಿ9ಕೈಕಂಬ: ಪೊಳಲಿ ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ ಜಾತ್ರೆ ಆರಂಭಗೊಳ್ಳುವುದು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಪ್ರತೀ ಮಾರ್ಚ್ ತಿಂಗಳ ಸಂಕ್ರಮಣದಂದು ಧ್ವಜಾರೋಹಣ ಆರಂಭವಾಗುತ್ತದೆ. ಈ ಬಾರಿ ಮಾರ್ಚ್ 14ರ ಸಂಕ್ರಮಣದಂದು ಪೊಳಲಿಯಲ್ಲಿ ದ್ವಜಾರೋಹಣ ಆರಂಭವಾಗುವುದು ವಿಶೇಷ ಎನಿಸಿದೆ. ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟ ನಂತರ ಪೊಳಲಿಯಲ್ಲಿ ಧ್ವಜಾರೋಹಣ ಆರಂಭವಾಗುತ್ತದೆ. ಪೊಳಲಿಯಲ್ಲಿ ಒಂದು ತಿಂಗಳ ಅವಧಿಯ ಜಾತ್ರೆ ಇರುವುದು ನಿಜ. ಆದರೆ ಎಷ್ಟು ದಿನಗಳ ಜಾತ್ರೆ ಇದೆ ಎಂದು ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ. ಇದೇ ಇಲ್ಲಿನ ಸಸ್ಪೆನ್ಸ್. ಒಟ್ಟು ಎಷ್ಟು ದಿನಗಳ ಕಾಲ ಜಾತ್ರೆ ಇರಬಹುದೆಂದು ಎಲ್ಲರೂ ಚಾತಕಪಕ್ಷಿಯಮತೆ ಕಾಯುತ್ತಾರೆ.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನಟ್ಟೋಜಿ ವಂಶದ ಮನೆನತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ಮುನ್ನಾದಿನ ತೆರಳಿ ಅಲ್ಲಿ ದಿನ ನಿಗದಿ ಮಾಡಿ ಪೊಳಲಿಗೆ ಆಗಮಿಸುತ್ತಾರೆ. ಕಂಚಿಲ್ (ಕಂಚುಬೆಳಕು) ಸೇವೆ ನಡೆದ ನಂತರ ನಟ್ಟೋಜರು ಹಿಂಗಾರದ ಹಾಳೆಯನ್ನು ದುರ್ಗಾ ದೇವಿ ಗುಡಿಯ ಹಿಂಬದಿಯಲ್ಲಿ ಸೇರಿಗಾರ(ವಾಳಗ ಊದುವವ)ನ ಕೈಯಲ್ಲಿ ಕೊಟ್ಟು ಆತನ ಕಿವಿಯಲ್ಲಿ ಆರಡದ ದಿನವನ್ನು ತಿಳಿಸುತ್ತಾರೆ. ನಂತರ ಸೇರಿಗಾರನು ಗೋಪುರದಲ್ಲಿ ಸೋಮಕಾಸುರ ಮತ್ತು ರಂಜಕಾಸುರನ ವೇಷದಲ್ಲಿ ಗೋಪುರದಲ್ಲಿ ನರ್ತನ ಮಾಡುವ ದೈವಪಾತ್ರಿ(ಪಂಬದ)ಯ ಕೈಗೆ ಹಿಂಗಾರದ ಹಾಳೆಯನ್ನು ಕೊಟ್ಟು ಆರಡದ ದಿನವನ್ನು ಆತನ ಕಿವಿಯಲ್ಲಿ ಮೆಲ್ಲನೆ ಉಸುರುತ್ತಾರೆ. ಇದನ್ನು ಪಂಬದ ಡಂಗೂರ ಕರೆಯುವ ರೀತಿಯಲ್ಲಿ ಕರೆಯುತ್ತಾ ಸಾಗುವುದನ್ನು ಕುದಿ ಲೆಪ್ಪುನಿನಿ(ಕುದಿ ಕರೆಯುವುದು) ಎನ್ನುತ್ತಾರೆ.
ಈ ಘಟನೆ ನಡೆಯುತ್ತಿರುವಾಗ ಸಾವಿರಾರು ಮಂದಿ ಭಕ್ತರು ಗೋಪುರದ ಎದುರಲ್ಲಿಜಾತ್ರೆಯ ದಿನವನ್ನು ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಆಗ ಪಂಬದ(ದೈವಪಾತ್ರಿ)ನು ತುಳು ಭಾಷೆಯಲ್ಲಿ ಇರ್ವತೊರ್ಂಭ ಪೋಪಿನಾನಿ ಆರಡ(29 ದಿನದ ನಂತರ ಆರಡ) ಎಂದು ಜೋರಾಗಿ ಕೂಗುತ್ತಾ ದೇವಸ್ಥಾನ ಸುತ್ತೆಲ್ಲಾ ತಿಳಿಸುತ್ತಾ ಸಾಗುತ್ತಾನೆ.
ಕುದಿ ಕರೆಯುವ ಮುನ್ನ ಅನೇಕ ಪ್ರಕ್ರಿಯೆಗಳು ನಡೆಯುತ್ತವೆ.
ಕುದಿ ಕರೆಯುವ ಮುನ್ನಾದಿನ ಪೊಳಲಿಗೆ ಸಂಬಂಧಪಟ್ಟ ಅಡ್ಡೂರಿನ ನಂದ್ಯ ಭಗವತಿ ಕ್ಷೇತ್ರದಿಂದ ಭಗವತಿ ದೇವಿಯ ಮೊಗಮೂರ್ತಿ ಹಾಗೂ ಅರಸು ದೈವದ ಆಯುಧ ಪೊಳಲಿಗೆ ಬರುತ್ತದೆ. ಈ ವೇಳೆ ತೂಟೆಧಾರಣೆ ನಡೆಸಲಾಗುತ್ತದೆ0 ಅವರನ್ನುಪೊಳಲಿಯ ಆಡಳಿತ ಮಂಡಳಿ ವಿಶೇಷ ರೀತಿಯಲ್ಲಿ ಬರಮಾಡಿಸಿಕೊಳ್ಳುತ್ತಾರೆ. ಅಲ್ಲಿಂದ ಪೊಳಲಿ ದೇವಸ್ಥಾನಕ್ಕೆ ಒಂದು ಸುತ್ತು ಬರಲಾಗುತ್ತದೆ. ಭಂಡಾರದ ಮನೆಯವರಿಗೆ ಸೂಕ್ತ ಸ್ಥಳಾವಕಾಶ, ಯಥೋಚಿತ ಸ್ಥಾನ ಅಲ್ಲಿಂದ ದೇವರನ್ನು ಭೇಟಿ ಮಾಡಿ ಅರಸು ದೈವದ ಆಯುಧ ಹಾಗೂ ಭಗವತಿಯ ದೇವಿಯ ಮೊಗವನ್ನು ಆಡಳಿತ ಮಂಡಳಿ ಸೂಚಿಸಿದ ಸ್ಥಳದಲ್ಲಿ ಇಡಲಾಗುತ್ತದೆ.
ಮರುದಿನ ಆರಡ ಕರೆಯುವ ಮುನ್ನ ನಂದ್ಯ ಮನೆತನದ ಗುರಿಕಾರ ಕಂಚಿಲ್ ಬಲಿ ಸೇವೆ ನಡೆದ ನಂತರ ಅಲ್ಲಿಂದ ದೇವಸ್ಥಾನದ ಮುಂಭಾಗದ ಪ್ರಮಾಣ ಬಾವಿಯತ್ತ ಆಗಮಿಸಿ ಅಲ್ಲಿ ಒಂದು ಸುತ್ತು ಬರಲಾಗುತ್ತದೆ. ಅಲ್ಲಿಂದ ಭಗವತಿ ದೇವಿಯ ಮೊಗವನ್ನು ನಂದ್ಯ ಮನೆತನದ ಗುರಿಕಾರ ಏರಿಸಿ ಮೂರು ಸುತ್ತು ತಿರುಗಿಸುತ್ತಾರೆ. ಇದನ್ನು ಕದ್ರ್ ಮುಡಿ ಏರಿಸುವುದು ಎನ್ನುತ್ತಾರೆ. ಕದ್ರ್ ಮುಡಿ ಏರಿದ ನಂತರವೇ ಮೇಲೆ ತಿಳಿಸಿದ ಆರಡ ಕರೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಕೈಯ್ಯಲ್ಲಿ ಜಾಗಟೆ, ಹಾಗೂ ತೆಂಬರೆ, ಅರಸು ದೈವದ ಆಯುಧ ಹಿಡಿದು ಪಂಬದರಿಬ್ಬರು ಸೋಮಕಾಸುರ ಹಾಗೂ ರಂಜಾಸುರನ ವೇಷದಲ್ಲಿ ಸಿದ್ದರಾಗಿರುತ್ತಾರೆ. ನಂತರ ನಾನು ಮೊದಲೇ ತಿಳಿಸಿದಂತೆ ಸೇರಿಗಾರ ಪಂಬದನ ಕಿವಿಯಲ್ಲಿ ಆರಡದ ದಿನವನ್ನು ಕಿವಿಯಲ್ಲಿ ತಿಳಿಸುತ್ತಾನೆ. ಇದನ್ನು ಕುದಿ ಕರೆಯುವುದು ಅಥವಾ ಆರಡ ಕರೆಯುವುಉ ಎನ್ನಲಾಗುತ್ತದೆ. ಎರಡು ದಿನಗಳ ಕಾಲ ಆರಡ ಕರೆಯಲಾಗುತ್ತದೆ. ಮೊದಲ ದಿನ ಆರಡ ಕರೆಯುತ್ತಾ ಅಲ್ಲಿಂದ ಸಮೀಪದ ಅಖಿಲೇಶ್ವರ ದೇವಸ್ಥಾನದವರೆಗೂ ಹೋಗಿ ಅಲ್ಲಿಯೂ ಆರಡ ಕರೆಯಲಾಗುತ್ತದೆ.
ಅಲ್ಲಿಂದ ಬಳಿಕ ಮರುದಿನ ದೇವಸ್ಥಾನಕ್ಕೆ ಸಂಬಂಧಪಟ್ಟ ಮಹಮ್ಮಾಯಿ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಕುದಿ ಕರೆಲಾಗುತ್ತದೆ. ಇದನ್ನು ಕಡಪು ಕರ್ಯಕ್ಕೆ ಪೋಪಿನಿ(ಕಡಪುಕರ್ಯಕ್ಕೆ ತೆರಳುವುದು) ಎನ್ನಲಾಗುತ್ತದೆ. ಅಲ್ಲಿಂದ ಫಲ್ಗುಣಿ ನದಿಯಲ್ಲಿ ದೋಣಿಯ ಮುಖಾಂತರ ನಂದ್ಯದ ಭಗವತಿ ಕ್ಷೇತ್ರಕ್ಕೆ ತೆರಳಿ ಅಲ್ಲಿಯೂ ಆರಡ ಕರೆಯುತ್ತಾನೆ. ನಂದ್ಯದ ಮನೆಯವರು ಪಂಬದರಿಬ್ಬರಿಗೆ ಸೂಕ್ತ ಉಪಚಾರಗಳನ್ನು ಮಾಡಿಸಿ,ಔತಣವನ್ನು ನೀಡಲಾಗುತ್ತದೆ. ಅಲ್ಲಿ ಆರಡ ಕರೆಯುವ ಪಂಬಧನಿಗೆ ಸಂಭಾವನೆ ನೀಡಿ ಬೀಳ್ಕೊಡಲಾಗುತ್ತದೆ.
ಅಲ್ಲಿಂದ ಸುಮಾರು 23ರಿಂದ 25ರ ದಿನದವರೆಗೆ ನಿಚ್ಚ ಬಲಿ(ಸಾಮಾನ್ಯ ಬಲಿ) ಇದ್ದು, ಆ ಬಳಿಕ ಐದು ದಿನಗಳ ಕಾಲ ಚೆಂಡು ಇರುತ್ತದೆ. ರಥೋತ್ಸ ನಡೆದ ನಂತರ ಆರಡ(ಆರಡ ಎಂದರೆ ಜಾತ್ರೆ ಮುಗಿಯುವ ಕೊಡಿಮರದಿಂದ ಧ್ವಜವನ್ನು ಇಳಿಸುವ ದಿನ ಅದಕ್ಕಿಂತ ಮುಂಚೆ ಪಲ್ಘುನಿ ನದಿಯಲ್ಲಿ ಜಳಕ ನಡೆದು ಜಾತ್ರೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ 27,28,29,30 ದಿನಗಳ ಜಾತ್ರೆ ನಡೆಯುವುದು ವಿಶೇಷ ಎನಿಸುತ್ತದೆ.
ಜಾತ್ರೆ ಆರಂಭಗೊಂಡ ನಂತರ ಪ್ರತೀ ಐದು ದಿನಕ್ಕೊಮ್ಮೆ ದಂಡಮಾಲೆ ಉತ್ಸವ ನಡೆಯುತ್ತದೆ. ಕೇಪುಳ ಹೂವಿನ ದಂಡೆಯ ಅಲಂಕಾರವನ್ನು ಬಲಿಉತ್ಸವ(ಸುಬ್ರಹ್ಮಣ್ಯ)ದ ಮೂರ್ತಿಗೆ ಐದು ದಿನಕ್ಕೊಮ್ಮೆ ಅಲಂಕರಿಸಲಾಗುತ್ತದೆ. ನಂತರ ಉಳಿದ ದಿನ ಸಾಮಾನ್ಯ ಬಲಿ ಉತ್ಸವ ನಡೆಯುತ್ತಿದ್ದು, ಐದು ದಿನ ಚೆಂಡು ಉತ್ಸವ, ಒಂದು ದಿನ ಮಹಾರಥೋತ್ಸವ ಹಾಗೂ ಕೊನೆಯ ದಿನ ಆರಡದಿಂದ ಜಾತ್ರೆ ಕೊನೆಗೊಳ್ಳುತ್ತದೆ. ದೇವಿಯು ಚಂಡಮುಂಡರನ್ನು ವಧಿಸಿ ಚೆಂಡಾಟವಾಡಿದ ಪ್ರತೀಕವಾಗಿ ಚೆಂಡಿನ ಉತ್ಸವ ನಡೆಸಲಾಗುತ್ತದೆ. ಮಳಲಿ(ಮಣೇಲ್) ಹಾಗೂ ಅಮ್ಮುಂಜೆ ಈ ಎರಡು ಊರುಗಳ ಮಧ್ಯೆ ಆಟ ನಡೆಯುತ್ತದೆ.
– ವಾಮನ್ ಕೈಕಂಬ
(ಸಂಗ್ರಹಿತ ಚಿತ್ರಗಳು)









