ಬಜ್ಪೆ: ಇಲ್ಲಿಗೆ ಸಮೀಪದ ಮುರನಗರ ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ನಡೆಯುತ್ತಿದ್ದ ಅಕ್ರಮ ಗೋಸಾಗಾಟ ತಡೆದ ಸಾರ್ವಜನಿಕರು ಒಂದು ಜಾನುವಾರು ಸಮೇತ ಮೂವರನ್ನು ಹಿಡಿದು ಪೊಲೀಸ್ ವಶಕ್ಕೊಪ್ಪಿಸಿದ್ದಾರೆ.


ಬಜ್ಪೆಯಿಂದ ಸಾಗುತ್ತಿದ್ದ ಏಸ್ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಯುವಕರ ತಂಡ ಮುರನಗರ ಸಮೀಪ ವಾಹನ ತಡೆದು ಮೂವರನ್ನು ಹಿಡಿದಿದೆ. ಈ ವೇಳೆ ವಾಹನದಲ್ಲಿ ಒಂದು ಹಸುವಿದ್ದು, ಅದನ್ನು ಕೆಳಕ್ಕೆ ಇಳಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಾಹನದಲ್ಲಿದ್ದವರು ಹಸುವನ್ನು ಸಾಕುವ ಉದ್ದೇಶದಿಂದ ಸಾಗಾಟ ನಡೆಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ಠಾಣೆಗೆ ಕೊಂಡೊಯ್ದಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಾರ್ವಜನಿಕರು ಠಾಣೆಯ ಮುಂದೆ ಜಮಾಯಿಸಿದ್ದಾರೆ.
