ಕೈಕಂಬ : ರಾಜ್ಯ ಮತ್ತು ದೇಶದಲ್ಲಿ ರಾಷ್ಟ್ರದ್ರೋಹಿ ಕೆಲಸಗಳು ನಡೆದಾಗ ಕಾಂಗ್ರೆಸ್ ಚಕಾರ ಎತ್ತಿಲ್ಲ. ಅಲ್ಪಸಂಖ್ಯಾತರ ಓಲೈಕೆ ಮೂಲಕ ಮತ ಗಳಿಸುವ ಏಕೈಕ ಉದ್ದೇಶದಿಂದ ದೇಶದ್ರೋಹಿಗಳು ಮತ್ತು ಕೋಮುವಾದಿ ಪಕ್ಷಗಳಿಗೆ ಆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ಐದು ವರ್ಷ ಸಿದ್ಧರಾಮಯ್ಯರ ಸರ್ಕಾರವಿದ್ದಾಗ ೨೦ರಿಂದ ೨೫ ಹಿಂದೂ ಯುವಕರ ಹತ್ಯೆ ನಡೆಯಿತು. ಆದರೆ ಬಿಜೆಪಿ ಸರ್ಕಾರ ಈವರೆಗೆ ಯಾವೊಂದು ಕ್ರಿಮಿನಲ್ ಚಟುವಟಿಕೆಗೆ ಆಸ್ಪದ ನೀಡಿಲ್ಲ. ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಅದರ ಬೆಂಬಲಿಗ ಪಕ್ಷವಾದ ಎಸ್ಡಿಪಿಐ ಮತ್ತು ಪಿಎಫ್ಐ ಅಪಪ್ರಚಾರ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗಲಿದೆ ಎಂದರು. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದೆ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷರ ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಕಾರ್ಯಕರ್ತರು ಕಾವೂರು ಜಂಕ್ಷನ್ನಲ್ಲಿ ಶನಿವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಶೆಟ್ಟಿ, ಎಸ್ಡಿಪಿಐಗೆ ಬೆಂಬಲ ನೀಡುವುದಿಲ್ಲ ಎನ್ನುತ್ತಿರುವ ಕಾಂಗ್ರೆಸ್, ಗುರುಪುರ ಗ್ರಾಮ ಪಂಚಾಯುತ್ನಲ್ಲಿ ಕೋಮುವಾದಿ ಎಸ್ಡಿಪಿಐಯೊಂದಿಗೆ ಕೂಡಿಕೊಂಡು ಆಡಳಿತ ನಡೆಸುತ್ತಿದೆ. ಅಲ್ಲಿ÷ಕೋಮುವಾದಿ ಪಕ್ಷದಿಂದ ಹೊರಬರಲು ಕಾಂಗ್ರೆಸ್ಗೆ ಧೈರ್ಯವಿದೆಯೇ ಎಂದು ನೇರ ಸವಾಲೆಸೆದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೇ ಮುಸ್ಲಿಂ ಯುವತಿಯರು ಸ್ವತಂತ್ರವಾಗಿ ಮಾತನಾಡುತ್ತಿದ್ದಾರೆ. ಎಲ್ಲ ಸಮುದಾಯದವರಂತೆ ಮುಸ್ಲಿಂ ಸಮುದಾಯದ ಯುವತಿಯರ ಶಿಕ್ಷಣಕ್ಕೂ ಬಿಜೆಪಿ ಮಹತ್ವ ನೀಡಿದೆ. ಆದರೆ ಆಧುನಿಕ ಯುಗದಿಂದ ಮತ್ತೊಂದು ಬಾರಿ ಶಿಲಾಯುಗಕ್ಕೆ ಕರೆದುಕೊಂಡು ಹೋಗುತ್ತಿರುವ ಎಸ್ಡಿಪಿಐ ಮತ್ತು ಪಿಎಫ್ಐ ಅವರಿಗೆ ಧರ್ಮದ `ಅಪೀಮು’ ತುಂಬಿಸುತ್ತಿದೆ. ಅಂತಹವರಿಗೆ ಸದಾ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಹಿಜಾಬ್ ವಿಷಯದಲ್ಲೂ ಕಾಂಗ್ರೆಸ್ ಪಕ್ಷ ನಾಯಕರು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಹರ್ಷ ಕೊಲೆ ಪಾತಕಿಗಳ ಬಂಧನವಾಗಿದ್ದು, ಅವರಿಗೆ ಕಠಿಣ ಶಿಕ್ಷೆಯಾಗದ ಹೊರತು ಬಿಜೆಪಿ ವಿರಮಿಸುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ ಮಾತನಾಡಿ, ಈಶ್ವರಪ್ಪರ ವಿಷಯವೆತ್ತಿ ಕಾಂಗ್ರೆಸ್ ಸದನದ ಕಲಾಪ ನಿಷ್ಪಲಗೊಳಿಸಲು ಪ್ರಯತ್ನಿಸಿದೆ. ಅಲ್ಪಸಂಖ್ಯಾತರ ಓಲೈಕೆ ಮತ್ತು ಆ ಮೂಲಕ ಮತ ಗಳಿಸುವ ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್ ಕೋಮುವಾದಿ ಪಕ್ಷಗಳ ಬೆನ್ನಿಗೆ ನಿಂತಿದೆ. ಜಾತ್ಯತೀತತೆ ಹೆಸರಲ್ಲಿ ವಿಷ ಬೀಜ ಬಿತ್ತುತ್ತಿದೆ. ಹಿಜಾಬ್ ವಿಷಯದಲ್ಲಿ ಕೋಮವಾದಿ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈಮಿಲಾಯಿಸಿಕೊಂಡಿದೆ ಎಂದರು.
ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ರಾಜ್ ಕೃಷ್ಣಾಪುರ ಮಾತನಾಡಿ, ಹಿಂದೂತ್ವ ಎಂದರೆ ಜಾತ್ಯತೀತತೆ, ಜಾತ್ಯತೀತತೆ ಎಂದರೆ ಹಿಂದೂತ್ವವಾಗಿದೆ. ಕಾಂಗ್ರೆಸ್ ಎಂದರೆ ರಾಷ್ಟçದ್ರೋಹಕ್ಕೆ ಮತ್ತೊಂದು ಹೆಸರು. ಅದು ಈ ದೇಶಕ್ಕೆ ದೊಡ್ಡ ಶಾಪ ಎಂದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಕಿರಣ್ ಕುಮಾರ್ ಕೋಡಿಕಲ್, ರಣದೀಪ್ ಕಾಂಚನ್, ಭರತ್ರಾಜ್ ಕೃಷ್ಣಾಪುರ, ಗಣೇಶ್ ಹೊಸಬೆಟ್ಟು, ವೇದಾವತಿ ಕುಳಾಯಿ, ಹಿರಿಯ ನಾಯಕರು, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವವವರು, ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಕ್ಷ ಮುಖಂಡ ಗಣೇಶ್ ಪಾಕಜೆ ಸ್ವಾಗತಿಸಿ, ವಂದಿಸಿದರು.
