ಕೈಕಂಬ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರದು ನಿಸ್ವಾರ್ಥ ಸೇವೆ. ತನಗೆ ಏನಾದರೂ ಸಿಗಬೇಕು ಎನ್ನುವ ಸ್ವಾರ್ಥ ವಿಲ್ಲದೆ ಸಮಾಜಕ್ಕೆ ಸೇವೆ ನೀಡಿದವರು, ಮಗುವಿನಂತಹ ಮುಗ್ದ ಮನಸ್ಸಿನ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಮತ್ತು ಅವರನ್ನು ಹತ್ತಿರದಿಂದ ಕಂಡು ಸನ್ಮಾನಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ, ಹಿಂದೆ ಪ್ರಶಸ್ತಿಗಾಗಿ ಅರ್ಜಿ ಹಾಕಿ ಲಾಬಿ ಮಾಡಬೇಕಿತ್ತು ಆದರೆ ಈಗ ಪ್ರಶಸ್ತಿ ಹಾಜಬ್ಬರಂತಹ ಸಾಧಕರನ್ನು ಹುಡುಕಿಕೊಂಡು ಬರುವಷ್ಟು ದೇಶದಲ್ಲಿ ಬದಲಾವಣೆಯಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಶನಿವಾರ ಎಡಪದವು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಸಭಾಭವನದಲ್ಲಿ ನಡೆದ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹರೇಕಳ ಹಾಜಬ್ಬ ಅವರು ತೀರಾ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅಕ್ಷರ ಕಲಿಯದ ನಾನು ರಾಷ್ಟ್ರ ಪತಿ ಮತ್ತು ಪ್ರಧಾನ ಮಂತ್ರಿಗಳ ಎದುರು ನಿಲ್ಲುವಂತೆ ಮಾಡಿದ್ದು ಮಾಧ್ಯಮಗಳು, ನಾನು ತೀರಾ ಬದಕುಟುಂಬದಲ್ಲಿ ಜನಿಸಿದವನು ಇಂದು ನಾನು ಇಂತಹ ಪ್ರಶಸ್ತಿ ಪಡೆದು ಸನ್ಮಾನ ಸ್ವೀಕರಿಸಲು ಸಹಕರಿಸಿದ ಲೋಕಸಭಾ ಸದಸ್ಯರು, ಶಾಸಕರಿಗೆ ಹಾಗೂ ಪ್ರೀತಿ ತೋರಿಸಿದ ಜನರಿಗೆ ನಾನು ಚಿರಋಣಿಯಾಗಿದ್ದೇನೆ ಅಲ್ಲದೇ ದಯವಿಟ್ಟು ನನ್ನನ್ನು ಯಾವುದೇ ಉದ್ಘಾಟನಾ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ ಅದನ್ನು ಮಾಡಬೇಕಾದವರು ಶಾಸಕರು ಹಾಗೂ ಜನಪ್ರತಿನಿಧಿಗಳು ಅದನ್ನು ಅವರೇ ಮಾಡಬೇಕು ಆದುದರಿಂದ ಅಂತಹ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ ಎಂದು ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮಾತನಾಡಿ ಮುಗ್ದ ಮನಸ್ಸಿನ ನಿಸ್ವಾರ್ಥ ಸೇವಾ ಮನೋಭಾವದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರನ್ನು ಸನ್ಮಾನಿಸಲು ಅವಕಾಶ ದೊರೆತಿರುವುದು ಎಡಪದವು ಗ್ರಾಮ ಪಂಚಾಯತ್ ಮತ್ತು ಗ್ರಾಮದ ನಾಗರೀಕರ ಸೌಭಾಗ್ಯ ಎಂದರು.
ಹಾಜಬ್ಬರಿಗೆ ಶಾಲು, ಪೇಟ ಹೊದೆಸಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಡಪದವು ವಿವೇಕಾನಂದ ಕಾಲೇಜಿನ ಅಧ್ಯಾಪಕ ವಾಸು ಕೆ. ಅವರು ಅಭಿನಂದನಾ ಭಾಷಣ ಮಾಡಿದರು. ಚಂದ್ರಶೇಖರ್ ಎಡಪದವು ಸಮ್ಮಾನ ಪತ್ರ ವಾಚಿಸಿದರು.ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ, ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಾಜೀವಿ ನಾಯ್ಕ್, ಪಂಚಾಯತ್ ನ ಸರ್ವ ಸದಸ್ಯರುಗಳು, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಆರೋಗ್ಯ ಸುರಕ್ಷಾ ಸಲಹಾ ಸಮಿತಿಯ ಅಶೋಕ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ಸ್ವಾಗತಿಸಿದರು, ಗಣೇಶ್ ಪಾಕಜೆ ನಿರೂಪಿಸಿ ಪಂಚಾಯತ್ ಸದಸ್ಯ ಕುಶಾಲ್ ಕುಮಾರ್ ವಂದಿಸಿದರು.
