ಮುಂಬಯಿ : ಕ್ರೀಯಾತ್ಮಕ ಸಮಾಜದ ನಿರ್ಮಾಣ ಮತ್ತು ಬಿಲ್ಲವ ಸಮೂದಾಯದ ಅಭ್ಯುದಯವೇ ಜಿಬಿಎಸ್ನ ಸಂಕಲ್ಪವಾಗಿದೆ. ಯುವ ಜನತೆಯನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವತಂತ್ರರಾಗಿಸುವ ಉದ್ದೇಶ ನಾವು ಹೊಂದಿದ್ದು, ಸಮೂದಾಯದ ಆಶೋತ್ತಗಳ ಸ್ಪಂದನೆಯೇ ನಮ್ಮ ಆಶಯವಾಗಿದೆ ಎಂದು ಗುಜರಾತ್ ಬಿಲ್ಲವರ ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ನುಡಿದರು.
ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಜಿಬಿಎಸ್ನ ನೂತನ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ವಿಶ್ವನಾಥ್ ಪೂಜಾರಿ ಮಾತನಾಡಿದರು.
ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ (ಬೆಳಣ್ಣು) ಬರೋಡಾ ಇವರ ಮುಂದಾಳುತ್ವ ಹಾಗೂ ದಕ್ಷ ಮಾರ್ಗದರ್ಶನದಲ್ಲಿ ಜರುಗಿದ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಗೌರವ ಕೋಶಾಧಿಕಾರಿ ಸುದೇಶ್ ವೈ.ಕೋಟ್ಯಾನ್ ಬರೋಡಾ ವೇದಿಕೆಯಲ್ಲಿದ್ದರು.
ಲಕ್ಷ್ಮಣ್ ಪೂಜಾರಿ ಬರೋಡಾ, ಗಣೇಶ್ ಗುಜರನ್ ಸೂರತ್, ವಾಸು ಪೂಜಾರಿ ಬರೋಡಾ (ಉಪಾಧ್ಯಕ್ಷರು), ರವಿ ಸಾಲಿಯಾನ್ ಬರೋಡಾ (ಜೊತೆ ಕೋಶಾಧಿಕಾರಿ), ಸಂಚಾಲಕರು ರೋಹಿದಾಸ್ ಪೂಜಾರಿ, ಜಿಬಿಎಸ್ ಸೂರತ್ ಸಂಚಾಲಕ ಪ್ರಭಾಕರ್ ಪೂಜಾರಿ, ಅಂಕ್ಲೇಶ್ವರ ಸಂಚಾಲಕ ಜಯಾನಂದ ಪೂಜಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಲ್ಲವರಲ್ಲಿ ಐಕ್ಯತೆ, ನ್ಯಾಯ ಸಮ್ಮತವಾದ ಬಾಳನ್ನು ದಯಪಾಲಿಸಲೆಂದೇ ಈ ಸಂಘ ಆಸ್ತಿತ್ವಕ್ಕೆ ತರಲಾಗಿದ್ದು ಈ ಸಂಘದುದ್ದಕ್ಕೂ ನನ್ನ ಬದುಕಿನ ಸೇವಾ ಕ್ಷಣಗಳನ್ನು ಕಳೆದಿದ್ದು, ತ್ಯಾಗ ಮನೋಭಾವನೆಯಿಂದ ಸಮಾಜದ ಋಣವನ್ನು ತೀರಿಸುವ ಉದ್ದೇಶದಿಂದ ಕಾರ್ಯವೆಸಗಿದ್ದೇನೆ. ಭವಿಷ್ಯದಲ್ಲಿ ನಮ್ಮಲ್ಲಿನ ಯುವ ಜನತೆ ಈ ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ. ಎಲ್ಲಾ ಸ್ತರಗಳಲ್ಲೂ ಕಾರ್ಯೋನ್ಮುಖರಾಗಬೇಕು. ಸಮಾಜದಲ್ಲಿ ಇನ್ನೂ ಕಡು ಬಡವರಿದ್ದು ಅವರ ಸೇವೆಯ ಅಗತ್ಯವಿದೆ. ನಾವೆಲ್ಲರೂ ಬಂಧುಗಳಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜದ ಸ್ಪಂದನೆ ಸುಲಭವಾಗುವುದು ಅದೇ ನಮ್ಮ ಜೀವನಕ್ಕೆ ತೃಪ್ತಿದಾಯಕ ಆಗಬಲ್ಲದು ಎಂದು ದಯಾನಂದ ಬೋಂಟ್ರಾ ತಿಳಿಸಿದರು.
ಸಂಘದ ಮಂದಿರದಲ್ಲಿನ ಕುಲಗುರು ಕೋಟಿ ಚೆನ್ನಯರು, ಕುಲದೇವತೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು, ಮಾತೆ ಗಾಯತ್ರಿದೇವಿಗೆ ಆದಿಯದಲ್ಲಿ ಪದಾಧಿಕಾರಿಗಳನ್ನು ಒಳಗೊಂಡು ದಯಾನಂದ ಬೋಂಟ್ರಾ ಆರತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ವಾಸು ವಿ.ಸುವರ್ಣ ಸ್ವಾಗತಿಸಿ ಸಭಾಕಲಾಪಗಳನ್ನು ನಿರ್ವಾಹಣೆಗೈದರು. ಸುದೇಶ್ ವೈ.ಕೋಟ್ಯಾನ್ ಧನ್ಯವದಿಸಿದರು.
