ಮುಂಬಯಿ: ಜಾಗತಿಕವಾಗಿ ಪಸರಿಸಿದ ಕೋವಿಡ್ ಮಹಾಮಾರಿಯಿಂದ ಪ್ರತಿಯೊಬ್ಬ ನಾಗರೀಕರು ಉಸಿರಾಟದ ತೊಂದರೆ ಬಗ್ಗೆ ಪರಿಣಾಮಕಾರಿಯಾಗಿ ತಿಳಿದಿದ್ದು ಆಮ್ಲಜನಕದ ಕೊರತೆಯ ಮೂಲ ಕಾರಣ ಸ್ವಯಂವಾಗಿ ತಿಳಿದು ಕೊಳ್ಳುವಂತಾಗಿದೆ. ಆದ್ದರಿಂದ ಗಿಡಮರಗಳ ಪೋಷಣೆ ಬಗ್ಗೆ ಮತ್ತಷ್ಟು ಜಾಗೃತಿಯ ಅಗತ್ಯವಿದ್ದು ಸಾಧ್ಯವಾದಷ್ಟು ಗಿಡಮರಗಳ ಪೋಷಣೆ ಮಾಡಬೇಕು.
ಇದು ಬರೇ ಒಂದು ದಿನದ ಕಾರ್ಯಕ್ರಮವಾಗದೆ ಸಸ್ಯೋತ್ಸವ ನಿತ್ಯೋತ್ಸವವಾಗಿ ಜಾರಿಯಲ್ಲಿಡಬೇಕು ಎಂದು ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು. ಜು0.4 ರಂದು ಭಾನುವಾರ ಬೆಳಿಗ್ಗೆ ಬೋರಿವಿಲಿ ಪಶ್ಚಿಮದಲ್ಲಿನ ವೀರ್ ಸಾವರ್ಕರ್ ಉದ್ಯಾನದಲ್ಲಿ ಆಯೋಜಿಸಿದ್ದ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗೋಪಾಲ್ ಶೆಟ್ಟಿ ತನ್ನ ಲೋಕಸಭಾ ಕ್ಷೇತದಲ್ಲಿನ ವಿವಿಧ ಟ್ರಸ್ಟ್, ಸಂಸ್ಥೆಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿ ಮನೆಗೊಂದು ಕಿರುವನ, ನಗರಕ್ಕೊಂದು ಉದ್ಯಾನ, ನಾಡಿಗೊಂದು ಅರಣ್ಯ ಬೆಳೆಸಿಕೊಳ್ಳುವ ಕಾಲಘಟ್ಟ ಇದಾಗಿದೆ.
ಜನರು ಪರಿಸರ ಪ್ರಾಮುಖ್ಯತೆಯ ವಿವಿಧ ಬಗೆಯ ಮರಗಳನ್ನು ನೆಡುವುದರಲ್ಲಿ ನಿರತರಾಗಬೇಕು. ನಮ್ಮಲ್ಲಿನ ಕೆಲವು ವಿದೇಶಿ ಪ್ರಭೇದಗಳ ಗಿಡಮರಗಳ ಆಯ್ಕೆ ಮಾಡಿ ಸ್ವಭಾವ ಮತ್ತು ಸುಂದರ ತೋಟದ ಜೊತೆಗೆ ನೆಮ್ಮದಿ ನೀಡುವ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗಣೇಶ್ ಖಣ್ಕರ್, ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಬಿಜೆಪಿ ಧುರೀಣರಾದ ಯೋಗೇಶ್ ಧುಬೆ, ನಗರ ಸೇವಕರಾದ ಶಿವಾನಂದ ಶೆಟ್ಟಿ, ಅಂಜಲಿ ಖೇಡ್ಕರ್, ಬೀನಾ ಧೋಶಿ, ಬಿಜೆಪಿ ಧುರೀಣ ಎಸ್.ಗಣೇಶ್, ಸಂಘಟಕ ರವೀಂದ್ರ ಎಸ್.ಶೆಟ್ಟಿ ಮತ್ತಿತರರು, ತೋಟಗಾರಿಕೆ ಇಲಾಖೆ ಮತ್ತಿತರ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.
