ಉಡುಪಿ: ತಾಯಿಂದ ಬೆರ್ಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ನವಿಲಿನ ಮರಿಗಳನ್ನು ಉಡುಪಿಯ ಸಮಾಜಸೇವಕರು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ. ಸುಭ್ರಮಣ್ಯ ನಗರ ವಾರ್ಡಿನ ಬಬ್ಬು ಸ್ವಾಮಿ ದೇವಸ್ಥಾನ ಸನಿಹದ ಹಾಡಿಯಲ್ಲಿ ನಾಲ್ಕು ನವಿಲಿನ ಮರಿಗಳು ಅಸಹಾಯಕ ಸ್ಥಿತಿಯಲ್ಲಿ ಶುಕ್ರವಾರ ಕಂಡು ಬಂದಿದ್ದವು.
ಮರಿಗಳು ತಾಯಿ ಮಡಿಲು ಸೇರಬಹುದೆಂದು, ಸ್ಥಳಿಯರು ತುಂಬ ಸಮಯ ಕಾದು ಕುಳಿತಿದ್ದರು. ಆದರೂ ತಾಯಿ ನವಿಲಿನ ಸುಳಿವು ಕಾಣದರಿಂದ ಸ್ಥಳಿಯರಾದ ಜನಾರ್ಧನ್ ಅವರು ಮರಿಗಳನ್ನು ಹಿಡಿದು ರಕ್ಷಿಸಿ ಇಟ್ಟಿದ್ದರು. ನಂತರ ಪಶುವೈದ್ಯ ಡಾ.ಸಂದೀಪ್ ಕುಮಾರ್ ಅವರ ಮೂಲಕ ಮಾಹಿತಿ ಪಡೆದ, ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಮತ್ತು ತಾರಾನಾಥ್ ಮೇಸ್ತ ಶಿರೂರು ಅವರು ಸ್ಥಳಕ್ಕೆ ಹೋಗಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿರುವ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸುವ ಉದ್ದೇಶದಿಂದ ಹಾಡಿಯಲ್ಲಿ ತಾಯಿ ನವಿಲಿಗೆ ಹುಡಾಕಾಟ ನಡೆಸಿದ್ದಾರೆ. ಆದರೆ ನವಿಲಿನ ಇರುವಿಕೆ ಗೋಚರಕ್ಕೆ ಬರಲಿಲ್ಲ. ನಂತರ ಮರಿಗಳನ್ನು ಸುರಕ್ಷಿತವಾಗಿ ಪಂಜರದಲ್ಲಿಟ್ಟು ತಂದು, ಹಸಿದ ಮರಿಗಳಿಗೆ ನೀರು, ಕಾಳುಗಳ ನೀಡಿದ್ದಾರೆ. ನಂತರ ಅವರು ಅರಣ್ಯಾಧಿಕಾರಿ ದೇವರಾಜ್ ಪಾಣ ಅವರಿಗೆ ಹಸ್ತಾಂತರಿಸಿದ್ದಾರೆ. ಸಮಾಜಸೇವಕರ ಸಮಯಪ್ರಜ್ಞೆಯಿಂದ ಹಾಡಿಯಲ್ಲಿ ನವಿಲ ಮರಿಗಳು ಮೂಂಗೂಸಿ, ಹಾವು, ಬೆಕ್ಕುಗಳಿಗೆ ಆಹಾರವಾಗುವುದು ತಪ್ಪಿದಂತಾಗಿದೆ.


