ವಾಮಂಜೂರು : “ನಮ್ಮ ಮನೆಯವರಿಗೆ ಸೀಟು ಸಿಗುತ್ತದೆ ಎಂದು ಪಕ್ಷ ಬದಲಿಸಿಲ್ಲ. ಕಾಂಗ್ರೆಸ್ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಪಕ್ಷಾಂತರಗೊಂಡಿದ್ದೇನೆ” ಎಂದು ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ತಿಳಿಸಿದರು.
ಅ. 25ರಂದು ಸುರತ್ಕಲ್ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ರಮಾನಾಥ ರೈ, ಮೊೈದಿನ್ ಬಾವ ಮೊದಲಾದವರ ಸಮ್ಮುಖದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡಿರುವ ಶೆಟ್ಟಿಗೆ ವಾಮಂಜೂರಿನಲ್ಲಿ ಅ. 26ರಂದು ತಿರುವೈಲ್ ವಾರ್ಡ್ ಕಾಂಗ್ರೆಸ್ ಪದಾಧಿಕಾರಿಗಳು ಸ್ವಾಗತಿಸಿದರು.
ವಾಮಂಜೂರಿನ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಗೃಹದಲ್ಲಿ ಆಯೋಜಿಸಲಾದ ಅಭಿನಂದನಾ ಹಾಗೂ ಚುನಾವಣಾ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ನಾವೆಲ್ಲ ಒಗ್ಗೂಡಿ ಕೆಲಸ ಮಾಡಿದರೆ ಮುಂಬರುವ ಮನಪಾ ಚುನಾವಣೆಯ ತಿರುವೈಲು ವಾರ್ಡ್ನಲ್ಲಿ(20)ಕಾಂಗ್ರೆಸ್ ಗೆಲುವು ಸಾಧ್ಯ. ಹಿಂದೆ ಈ ವಾರ್ಡು ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ನಾವೀಗ ಕಾಂಗ್ರೆಸ್ ಅಭ್ಯರ್ಥಿಯ ಮೂಲಕ ಈ ವಾರ್ಡಿನ ಮೇಲೆ ಹಕ್ಕು ಸ್ಥಾಪಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ನಾಯಕರೊಂದಿಗೆ ಯುವಕರ ತಂಡ ಸಕ್ರಿಯವಾಗಿ ಕೆಲಸ ಮಾಡಿದರೆ ತಿರುವೈಲು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸುಲಭ ಜಯ ಸಿಗಲಿದೆ. ಸದ್ಯ ಐದು ಮಂದಿ ಆಕಾಂಕ್ಷಿಗಳಿದ್ದಾರೆ. ಆಯ್ಕೆಯಾಗುವ ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲರ ಬೆಂಬಲ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತಾಪಂ ಸದಸ್ಯ ಸುನಿಲ್ ಜಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಿ ಶೇಖಬ್ಬ, ಕಾಂಗ್ರೆಸ್ ಪದಾಧಿಕಾರಿಗಳಾದ ನವೀನ್ಚಂದ್ರ ಆಳ್ವ, ಮೆಲ್ವಿನ್ ಪಿಂಟೊ, ಇಂತಿಯಾಜ್, ಸದಾಶಿವ ಕೆ, ಯಶವಂತ ಶೆಟ್ಟಿ, ಸದಾಶಿವ ಶೆಟ್ಟಿ, ಕೃಷ್ಣ ಗೌಡ, ಐತಪ್ಪ ಪೂಜಾರಿ, ಲಾರೆನ್ಸ್ ಡಿ’ಸೋಜ, ಜಯಂತಿ, ಸ್ಟ್ಯೇನಿ, ಬಾಷಾ ಗುರುಪುರ, ಭಾಷಾ ಮಾಸ್ಟಸ್, ಉಂಞ ಗುರುಪುರ, ಅಬ್ದುಲ್ ಸಮದ್, ಮಾಜಿ ಕಾರ್ಪೊರೇಟರ್ ಮೀರಾ ಮತ್ತಿತರರು ಇದ್ದರು. ತಿರುವೈಲ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಸ್ವಾಗತಿಸಿ, ವಂದಿಸಿದರು.
