ಪೊಳಲಿ :ಪ್ರಸಕ್ತ ಕಾಲಘಟ್ಟದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು ಪುನರುತ್ಥಾನಗೊಳ್ಳುವ ಮೂಲಕ ಹಿಂದೂ ಧರ್ಮ ಮುಂದೆ ಬರುತ್ತಿದ್ದು, ಈ ಧರ್ಮಕ್ಕೆ ನಾಶ ಎನ್ನುವುದೇ ಇಲ್ಲ. ಪೊಳಲಿಯನ್ನು ಎಲ್ಲ ಜಾತಿ ಸಮುದಾಯದವರು ಸೇರಿ ಸೇವೆ ಸಲ್ಲಿಸುತ್ತಿದ್ದು, ಈ ಜಾತಿ ವ್ಯವಸ್ಥೆ ಎನ್ನುವುದು ಧರ್ಮವನ್ನು ಉನ್ನತಸ್ತರಕ್ಕೇರಿಸುವ ವ್ಯವಸ್ಥೆ ಆಗಿದೆ. ವೃತ್ತಿಯಾಧಾರದಲ್ಲಿ ಜಾತಿ ಹುಟ್ಟಿಕೊಂಡಿದ್ದು ಇದರಿಂದ ಸಮಾಜ ಒಗ್ಗೂಡುತ್ತದೆ. ಆದರೆ ಕೆಲವರು ಜಾತಿ ವ್ಯವಸ್ಥೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ವಿಪರ್ಯಾಸ ಎಂದು ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.

ಅವರು ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.11ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ವಿದ್ವಾಂಸ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪೊಳಲಿಯ ವಿಶೇಷತೆ ಎಂದರೆ ದುರ್ಗೆಯ ಮೂರ್ತಿ ಕಲ್ಲಿನದ್ದು, ರಾಜರಾಜೇಶ್ವರಿ ಮೂರ್ತಿ ಮಣ್ಣಿನದ್ದು, ಸುಬ್ರಹ್ಮಣ್ಯನ ಬಲಿಮೂರ್ತಿ ಕಂಚಿನದ್ದು, ಕ್ಷೇತ್ರಪಾಲನ ಮೂರ್ತಿ ಮರದ್ದು, ಕೊಡಮಣಿತ್ತಾಯಿ ದೈವದ ಮೊಗ ಬೆಳ್ಳಿಯದ್ದಾಗಿರುವುದು ವಿಚಿತ್ರವಾಗಿದೆ. ಮಾತೃದೇವೋಭವ ಎನ್ನುವಂತೆ ಪೊಳಲಿ ಮಾತೆ ಎಲ್ಲರಿಗೂ ಮಾತೆಯಾಗಿ ನಿಂತು ಎಲ್ಲರನ್ನು ಅನುಗ್ರಹಿಸುದ್ದಾಳೆ.
ಪೊಳಲಿಯ ಧ್ವಜಾರೋಹಣದ ದಿನ ಎಲ್ಲರಿಗೂ ಗೊತ್ತಿದ್ದರೂ ಧ್ವಜಾವರೋಹಣದ ದಿನ ಯಾರಿಗೂ ಗೊತ್ತಿರುವುದಿಲ್ಲ. ಪುತ್ತಿಗೆ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ತೆರಳಿ ದಿನ ನಿಗದಿ ಮಾಡಿ ಸೇರಿಗಾರನ ಮುಖಾಂತರ ಸೋಮಕಾಸುರ-ರೆಂಜಕಾಸುರ ಎನ್ನುವ ದೈವಪಾತ್ರಿಗಳ ಮುಖಾಂತರ ಆರಡದ ದಿನ ಗೊತ್ತಾಗುವುದು ಇಲ್ಲಿನ ವೈಶಿಷ್ಠ್ಯ ಎಂದು ಹೇಳಿದರು.

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಶೆಟ್ಟಿ ಮಾತಾಡಿ, ಹಿಂದೂ ಧರ್ಮ ನಶಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಧರ್ಮಕ್ಕೆ ಗ್ಲಾನಿ ಬಂದಾಗ ಕೃಷ್ಣನ ಅವತಾರ ಆಗುತ್ತದೆ. ಪೊಳಲಿ ದೇವಸ್ಥಾನದಲ್ಲಿ ಸೇರಿರುವ ಜನಸ್ತೋಮವನ್ನು ಗಮನಿಸಿದಾಗ ಕರಾವಳಿಯಲ್ಲಿ ಹಿಂದೂ ಧರ್ಮ ಮೇಲ್ಸ್ತರದಲ್ಲಿದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದರು.
ಕೃಪಾ ಅಮರ್ ಆಳ್ವ, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಮೊಕ್ತೇಸರುಗಳಾದ ಡಾ| ಮಂಜಯ್ಯ ಶೆಟ್ಟಿ, ಯು.ಟಿ. ತಾರನಾಥ ಆಳ್ವ, ಮಾಜಿ ಸಚಿವ ಅಭಯ ಚಂದ್ರ ಜೈನ್ ಮುಂತಾದವರು ಉಪಸ್ಥಿತರಿದ್ದರು. ಈ ವೇಳೆ ಚಂದ್ರಹಾಸ ಪಲ್ಲಿಪಾಡಿ, ಕಾರಮೊಗರು ಇಂಡಸ್ಟ್ರೀಸ್ನ ಮನೋಜ್ ಭಂಡಾರಿ, ಶಿವಕುಮಾರ್, ಹರಿಕೃಷ್ಣ ನಂಬೂದಿರಿ ಅವರನ್ನು ಸಮ್ಮಾನಿಸಲಾಯಿತು.

