ಪಡುಬಿದ್ರಿ: ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಉಪ ಸಾನ್ನಿಧ್ಯ ಶ್ರೀ ವೀರಾಂಜನೇಯ ದೇವರ ಗರ್ಭ ಗುಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಸಂಭವಿಸಿದೆ.
ರಾತ್ರಿ ಇಲ್ಲಿನ ಅರ್ಚಕ ಸತ್ಯನಾರಾಯಣ ಆಚಾರ್ಯ ಪೂಜೆ ಮುಗಿಸಿ ಬೀಗ ಹಾಕಿ ತೆರಳಿದ್ದು ಶುಕ್ರವಾರ ಮುಂಜಾನೆ ಇಲ್ಲಿಗೆ ಬಂದಾಗಲೇ ಈ ಘಟನೆಯು ಬೆಳಕಿಗೆ ಬಂದಿದೆ. ಈ ಬಗ್ಗೆ ಎಲ್ಲೂರು ದೇಗುಲದ ಪ್ರಬಂಧಕ ರಾಘವೇಂದ್ರ ರಾವ್ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳವಾದ ಸೊತ್ತು ವಿವರ: ಬೆಳ್ಳಿಯ ಪ್ರಭಾವಳಿ 2ಕೆಜಿ ತೂಕ, ಆಂಜನೇಯ ದೇವರ ಬೆಳ್ಳಿಯ ಕವಚ 1ಕೆಜಿ ತೂಕ, ಬೆಳ್ಳಿಯ ತಂಬಿಗೆ 2, ಬೆಳ್ಳಿಯ ಆರತಿ 2, ಬೆಳ್ಳಿಯ ಕಾಲುದೀಪ, ಆರತಿ ಹರಿವಾಣ, ಚಿನ್ನದ ಸರ ಕಳವಾಗಿರುವ ಸೊತ್ತುಗಳಾಗಿವೆ. ಕಳ್ಳತನದ ಸುದ್ದಿ ತಿಳಿಯುತ್ತಲೇ ದೇಗುಲದ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ಸಿಬಂದಿ ಹಾಗೂ ಗ್ರಾಮ ಸೀಮೆಯ ನೂರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿ ಕಳವಿನ ಬಗ್ಗೆ ವಿಮರ್ಶೆ ಪ್ರಾರಂಭಿಸಿದ್ದಾರೆ.
ಕೆರೆಯಲ್ಲಿ ಜಾಲಾಡಿದ ಸ್ಥಳೀಯರು: ಕಳವಾದ ಸೊತ್ತುಗಳನ್ನು ಮತ್ತು ಪ್ರಭಾವಳಿಯ ಮರದ ಅಚ್ಚನ್ನು ಕೆರೆಗೆ ಎಸೆದು ಹೋಗಿರಬಹುದೆಂಬ ಶಂಕೆಯೊಂದಿಗೆ ಸ್ಥಳೀಯರು ಗುಡಿಯ ಮುಂಭಾಗದ ಕೆರೆಯಲ್ಲಿ ಮುಳುಗು ಹಾಕಿ ಪರಿಶೀಲನೆ ನಡೆಸಿದ್ದಾರೆ. ಸೊತ್ತುಗಳು ಪತ್ತೆಯಾಗಿಲ್ಲ. ಕಾಪು ವೃತ್ತ ನಿರೀಕ್ಷಕ ವಿ. ಎಸ್. ಹಾಲಮೂರ್ತಿ ರಾವ್ ಅವರ ಸಹಿತ ಪಡುಬಿದ್ರಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

