ಕೈಕಂಬ: ಸುಮಾರು 100 ಲೋಡಿನಷ್ಟು ಮರಳನ್ನು ಬಜಪೆ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಜಫ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಮತ್ತೂರು ಸಮೀಪದ ನೋಣಲ್ನ ಫಲ್ಗುಣಿ ನದಿಯ ತಟದಲ್ಲಿ ದಾಸ್ತಾನು ಇದ್ದ ಮರಳು ರಾಶಿ ಇದರ ಮೌಲ್ಯ ಸರಿಸುಮಾರು 5ರಿಂದ 6 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ.
ಮುತ್ತೂರು ಸಮೀಪದ ನೋಣಲ್ನಲ್ಲಿ ಹಾದುಹೋಗಿರುವ ಪ್ರದೇಶದಲ್ಲಿ ತೂಗುಸೇತುವೆ ಇದೆ. ಇದರ ಸಮೀಪವೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದರ ಕಾಮಗಾರಿ ನಡೆಯುತ್ತಿದೆ.
ಇದನ್ನೇ ನೆಪ ಮಾಡಿಕೊಂಡ ಮರಳುದಂಧೆಕೋರರು ಕಾಮಗಾರಿಯ ಹೆಸರಲ್ಲಿ ಜೆಸಿಬಿ ಯಂತ್ರಗಳಿಂದ ಮರಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇದರಿಂದಾಗಿ ಮರಳು ದಂಧೆಕೋರರ ಅಡ್ಡಗಳು ಬೆಳಕಿಗೆ ಬಂದಿರಲಿಲ್ಲ. ಈ ಮರಳನ್ನು ತಡರಾತ್ರಿ ಬೇರೊಂದು ಒಳರಸ್ತೆಯ ಮೂಲಕ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಜಪೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎಸಿಪಿ ರಾಜೇಂದ್ರ ಮಾರ್ಗದರ್ಶನದಲ್ಲಿ ಸುಮಾರು 100 ಲೋಡು ಮರಳು ವಶಪಡಿಸಿಕೊಂಡಿದ್ದು,ಈ ಮರಳು ಯಾರಿಗೆ ಸೇರಿದೆ ಎಂದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.
