ಬೆಳ್ತಂಗಡಿ: ತಾಲೂಕಿನ ಮುಂಡಾಜೆ, ಸೋಮಂತಡ್ಕದ ಬಳಿಕ ದಿಡುಪೆಗೆ ಹೋಗುವ ರಸ್ತೆ ಕಳಪೆ ಕಾಮಾಗಾರಿ ಎಂದು ಆರೋಪಿಸಿ 2009ರಲ್ಲಿನ ನೀಡಿದ ದೂರಿನಂತೆ ಲೋಕಾಯುಕ್ತ ತನಿಖಾಧಿಕಾರಿ ಮತ್ತು ಇಂಜಿನಿಯರ್ ಇದೀಗ ರಸ್ತೆ ಪರಿಶೀಲನೆ ನಡೆಸಲಿದ್ದಾರೆ.
4 ಕಿ.ಮೀ. ಉದ್ದದ ರಸ್ತೆಯ ಕಾಮಗಾರಿ ಕಳಪೆಯಾಗಿದೆ ಎಂದು ಲೋಕಾಯುಕ್ತರಿಗೆ ಸೋಮಂತಡ್ಕ-ದಿಡುಪಿ-ಸಂಸೆ ರಸ್ತೆ ಹೋರಾಟ ಸಮಿತಿ ಸಂಚಾಲಕ ಜಯರಾಜ್ ಸಾಲ್ಯಾನ್ ದೂರು ನೀಡಿದ್ದರು. 2010ರಲ್ಲಿ ರಸ್ತೆ ಹೋರಾಟ ಸಮಿತಿಯು ಊರವರೊಂದಿಗೆ ಸೇರಿ ಲೋಕೋಪಯೋಗಿ ಇಲಾಖೆ ಎದುರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಡಾಂಬರು ಹಾಕುವ ಕಾರ್ಮಿಕರ ಮತ್ತು ಊರವರ ಮಧ್ಯೆ ವಾಗ್ವಾದವೂ ನಡೆದಿತ್ತು. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು. ಬಳಿಕ ಸೋಮಂತಡ್ಕದಿಂದ ದಿಡುಪೆಯವರೆಗೆ ಉತ್ತಮ ರಸ್ತೆ ನಿರ್ಮಾಣ ನಡೆದಿತ್ತು.
ಇದೀಗ 9 ತಿಂಗಳ ಸುದೀರ್ಘ ಅವಧಿಯ ಬಳಿಕ ಲೋಕಾಯುಕ್ತ ತಾಂತ್ರಿಕ ವಿಭಾಗದಿಂದ ತನಿಖೆ ನಡೆಸಲು ಮೇ28 ಮತ್ತು 29 ರಂದು ಸ್ಥಳ ತನಿಖೆ ನಡೆಸಲಿದ್ದಾರೆ. ಅಲ್ಲದೆ ಇದೀಗ ರಸ್ತೆಯ ಮರು ಡಾಂಬರೀಕರಣ ಪ್ರಾರಂಭಗೊಂಡಿದೆ.

