ಮಂಗಳೂರು: ಯಾರು ಏನೇ ಹೇಳಿದ್ರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಂಡಿತವಾಗಿಯೂ ಮೋದಿ ಅಲೆ ಇರುವುದಂತೂ ನಿಜ. ಮೋದಿಗೋಸ್ಕರ ಮಿಡಿಯುವ ಯುವ ಸಮೂಹ ಹಾಗೂ ಹಿರಿಯ ಜೀವಗಳು ಬಹುಸಂಖ್ಯೆಯಲ್ಲಿ ಈ ಜಿಲ್ಲೆಯಲ್ಲಿವೆ.
ತಿಂಗಳುಗಳ ಮೊದಲು ಪಕ್ಷಕ್ಕಿಂತ ವ್ಯಕ್ತಿ ಮುಖ್ಯ, ಒಳ್ಳೆಯ ಕೆಲಸಮಾಡಿದ ವ್ಯಕ್ತಿಗೆ ನಮ್ಮ ಮತ ಎಂದು ಹೇಳುತ್ತಿದ್ದ ಇಲ್ಲಿನ ಜನತೆ ಮೋದಿ ಬಂದು ಹೋದ ಬಳಿಕ ನನ್ನ ಮತ ಮೋದಿಗೆ ಅನ್ನುವ ಮಟ್ಟಿಗೆ ಮೋದಿ ಮೋಡಿ ಮಾಡಿ ಹೋಗಿದ್ದಾರೆ.
ಮೋದಿಯವರ ಒಂದೇ ಒಂದು ಪ್ರಚಾರ ಸಭೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯೊಳಗಿದ್ದ ಅಸಮಾಧಾನದ ಹೊಗೆಯನ್ನು ಶಾಶ್ವತವಾಗಿ ಮುಚ್ಚಿ ಹಾಕಿದ್ದು ಸುಳ್ಳಲ್ಲ.
ಕರಾವಳಿ ಜನರು ಅಷ್ಟು ಸುಲಭವಾಗಿ ಅಭ್ಯರ್ಥಿಗಳ ಯಾವುದೇ ಆಮಿಷಕ್ಕೆ ಒಳಗಾಗುವವರಲ್ಲ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಅನ್ನೋ ಮನೋಭಾವ ಅದೆಷ್ಟೋ ವರುಷದಿಂದ ಇಲ್ಲಿ ಇದ್ದರು ಕೂಡ ಈಗಿನ ಕೆಲವು ವರುಷದಿಂದ ಮೋದಿ ಮೇಲಿನ ಅಲೆ ಅನೇಕ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ಯಶಸ್ಸುಗಳಿಸಿ ಬಿಜೆಪಿಯನ್ನು ಧೂಳಿಪಟ ಮಾಡಿದ್ದ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಶಾಕ್ ಕಾದಿತ್ತು.
ಕಳೆದ ಲೋಕ ಸಭೆ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಬೃಹತ್ ಅಂತರದಿಂದ ಗೆದ್ದು ಬಂದಿದ್ದರು.ಇದರಲ್ಲೂ ಮೋದಿ ಅಲೆ ಖಂಡಿತವಾಗಿಯೂ ಕೆಲಸ ಮಾಡಿತ್ತು. ಇದೀಗ 2018 ರ ವಿಧಾನಸಭೆಯ ಅಂತಿಮ ಪ್ರಚಾರ ಘಟ್ಟದಲ್ಲಿ ಮೋದಿ ಬಂದು ಬದಲಾವಣೆಯ ಪರ್ವವನ್ನೆ ಬರೆದು ಹೋಗಿದ್ದಾರೆ ಎಂಬುದು ಸ್ಥಳೀಯ ರಾಜಕೀಯ ವಿಶ್ಲೇಷಕರ ಮಾತು. ಜತೆಗೆ ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸುವಂತೆ ಫಲಿತಾಂಶ ಹೊರಬೀಳಲಿದೆ ಎಂಬುದು ರಾಜಕೀಯ ಪಂಡಿತರ ಮಾತು .

