ಗುರುಪುರ: ಇಲ್ಲಿನ ದೇವಂದಬೆಟ್ಟುವಿನ ಕಡು ಬಡತನದ ಕುಟುಂಬವೊಂದರ ಯಜ್ಞಾ, ಗುರುಪುರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಎಸೆಸೆಲ್ಸಿ ಪರೀಕ್ಷೆಯಲ್ಲಿ 457 ಅಂಕ ಪಡೆದು ಶಾಲೆ ಮತ್ತು ಪಾಲಕರ ಪ್ರೀತಿಗೆ ಪಾತ್ರಳಾಗಿದ್ದಾಳೆ.
ಅಜ್ಜಿಯ ತುಂಬು ಕುಟುಂಬದ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಈಕೆ ಅತ್ಯಂತ ಕಠಿಣ ಪರಿಶ್ರಮದಿಂದ ಈ ಸಾಧನೆಗೈದಿದ್ದು, ಮುಂದೆ ವಕೀಲೆಯಾಗಬೇಕೆಂಬ ಕನಸು ಕಂಡಿದ್ದಾಳೆ. ಯಮುನಾ-ಮೋಹನದಾಸ್ ಕೊಲ್ಯ ದಂಪತಿಯ ಪುತ್ರಿಯಾದ ಈಕೆಯ ಓದಿಗೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ಅಜ್ಜಿ ಹಾಗೂ ಮಾವಂದಿರು ಮತ್ತು ಅತ್ತೆಯರು ನೆರವಾಗಿದ್ದಾರೆ. ಸಹೋದರಿ ಪ್ರಜ್ಞಾ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ ಎರಡು ವರ್ಷದಲ್ಲಿ ಯಜ್ಞಾಗೆ ಬೀಡಿಯ ಸ್ಕಾಲರ್ಶಿಪ್ ಕೂಡಾ ಸಿಕ್ಕಿಲ್ಲ. ಆದರೆ ಮನೆಯವರ ಪ್ರೋತ್ಸಾಹದೊಂದಿಗೆ ಈಕೆ ಈಗ ಯಶಸ್ವಿನ ಒಂದು ಮಜಲು ದಾಟಿದ್ದಾಳೆ.

