ಬಂಟ್ವಾಳ: ಕ್ಷೇತ್ರದಾದ್ಯಂತ ಮರಳು ಮಾಫಿಯಾ ಮತ್ತು ಅರಣ್ಯ ಮಾಫಿಯಾದಿಂದ ಜನ ಬೇಸತ್ತಿದ್ದು, ಸೇಡಿನ ಮತ್ತು ಓಲೈಕೆ ರಾಜಕಾರಣದಿಂದ ಜನ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗಳಿಂದಲೂ ಬಿಜೆಪಿ ಗೆಲ್ಲಿಸುವ ಕೂಗು ಕೇಳಿಬರುತ್ತಿದೆ ಎಂದು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಹೇಳಿದ್ದಾರೆ.
ಬುಧವಾರ ಇಲ್ಲಿನ ಪೆರಾಜೆ, ಬಾಳ್ತಿಲ,ಗೋಳ್ತಮಜಲು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಮತಯಾಚಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಲ್ಲಡ್ಕ ಶಾಲೆಯ ಶಿಲಾನ್ಯಾಸದ ಸಮಯದಲ್ಲಿ ಸೆಕ್ಷನ್ ಹಾಕಿದವರಿಂದಲೇ ಈ ರೀತಿಯ ಅನ್ಯಾಯಗಳು ಮತ್ತೆ ಮತ್ತೆ ಆಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಚುನಾವಣೆ ಸಮೀಪವಿರುವಾಗ ಒಂದು ವರ್ಗದ ಓಲೈಕೆಗೋಸ್ಕರ ಬಡ ಮಕ್ಕಳ ಅನ್ನ ಕಸಿದಿರುವುದು ಉಸ್ತುವಾರಿ ಸಚಿವರಿಗೆ ಶೋಭೆಯಲ್ಲ ಎಂದವರು,
ಸೇಡಿನ ರಾಜಕೀಯ ಬೇಡ ಸೌಹಾರ್ದತೆಯನ್ನು ಬೆಳೆಸುವ. ಕೊಲೆ ಸುಲಿಗೆಗಳಿಲ್ಲದ ನೆಮ್ಮದಿಯ ನಾಳೆಗಳಿಗಾಗಿ ಬಂಟ್ವಾಳದ ಜನ ರಾಜೇಶ್ ನಾಯ್ಕ್ ಬೆಂಬಲಿಸುವ ಅನಿವಾರ್ಯತೆ ಇದೆ ಎಂದರು.
ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್, ಯವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ತಾಪಂ ಸದಸ್ಯ ಮಹಾಬಲ ಶೆಟ್ಟಿ, ರಾಜೇಶ್ ಕೊಟ್ಟಾರಿ, ಗುರುವಪ್ಪ ನೆಟ್ಲ, ರವಿರಾಜ್ ಕೋಟ್ಯಾನ್, ರಮೇಶ್ ಡ್ರೈವರ್, ವಿಶ್ವನಾಥ ಆಳ್ವ, ಪೂವಪ್ಪ ಶೆಟ್ಟಿ, ನಾಗೇಶ್ ಕೆ, ಚಿದಾನಂದ ಪಟ್ಟೆಕೋಡಿ, ವಿಶ್ವನಾಥ ಸಪಲ್ಯ, ಗಂಗಾಧರ ಟೈಲರ್ ಉಪಸ್ಥಿತರಿದ್ದರು.

