ಮೂಡುಬಿದಿರೆ: ಕಳೆದ 20 ವರ್ಷಗಳಿಂದ ಮೂಡುಬಿದಿರೆ ಕ್ಷೇತ್ರವನ್ನು ಪ್ರತಿನಿಧಿಸಿದವರು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಲ್ಲ. 2008ರಲ್ಲಿ ಮಂಜೂರಾದ ಒಳಚರಂಡಿ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ ಎಂದು ಪಕ್ಷೇತರ ಅಭ್ಯರ್ಥಿ ಅಶ್ವಿನ್ ಜೆ. ಪಿರೇರಾ ಆರೋಪಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೂಡುಬಿದಿರೆಗೆ ಸರ್ಕಾರಿ ಪದವಿಪೂರ್ವ, ಪದವಿ, ಪಾಲಿಟೆಕ್ನಿಕ್ ಕಾಲೇಜುಗಳು ನಿರ್ಮಾಣಗೊಂಡಿಲ್ಲ. ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಈ ಸೌಲಭ್ಯವಿದ್ದರೂ ಈ ಕ್ಷೇತ್ರಕ್ಕೆ ತರಲು ಶಾಸಕರು ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಮುದ್ರಾ ಯೋಜನೆ ಸ್ಕಿಲ್ ಡೆವಲಪ್ಮೆಂಟನ್ನು ಪರಿಣಾಮಕಾರಿಯಾಗಿ ಅನಿಷ್ಠಾನಗೊಳಿಸುವ ಕುರಿತು ಸಂಸದರು ಆಸಕ್ತಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಮೂಡುಬಿದಿರೆಯ ಜೆಡಿಎಸ್ನ ಶೇ 90 ರಷ್ಟು ಕಾರ್ಯಕರ್ತರು ನನ್ನೊಂದಿಗೆ ಸಕ್ರಿಯರಾಗಿದ್ದಾರೆ. 210 ಬೂತ್ಗಳನ್ನು ರಚಿಸಲಾಗಿದ್ದು ಎಲ್ಲೆಡೆ ಉತ್ತಮ ವಾತಾವರಣವಿದೆ. ಗೆಲುವಿನ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಬೆದರಿಕೆ ಹಾಕುತ್ತಿರುವುದಲ್ಲದೆ ವಾಟ್ಸಪ್ ಫೇಸ್ಬುಕ್ಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಯಾವುದೇ ಬೆದರಿಕೆ ಧಮ್ಕಿಗಳಿಗೆ ಹೆದರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಖಂಡರಾದ ಜೆರಾಲ್ಡ್ ಮೆಂಡಿಸ್, ಲ್ಯಾನ್ಸಿ ಡೇಸಾ, ಸುನೀಲ್ ಶೆಟ್ಟಿ, ಶರೀಫ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.

